ನವದೆಹಲಿ: ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆಯೊಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿದೆ. ಸಾಯಲು ಈ ಕುಟುಂಬದ ಸದಸ್ಯರು ಕಂಡು ಕೊಂಡ ಮಾರ್ಗ ನಿಜಕ್ಕೂ ಬೆಚ್ಚಿ ಬೀಳಿಸುತ್ತದೆ.
ದಿಲ್ಲಿಯ ವಸಂತವಿಹಾರದ ಅಪಾರ್ಟ್ಮೆಂಟ್ನ ಫ್ಲ್ಯಾಟ್ವೊಂದರಲ್ಲಿ ತಾಯಿ ಹಾಗೂ ಹೆಣ್ಣುಮಕ್ಕಳಿಬ್ಬರ ಶವ ಪತ್ತೆಯಾಗಿದೆ. ಇವರ ಸಾವಿಗೆ ಕಾರಣವನ್ನು ಹುಡುಕಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಈ ಮೂವರು ಮೂರು ದಿನಗಳ ಹಿಂದೆ ಮನೆಯ ಬಾಗಿಲು, ಕಿಟಕಿಗಳನ್ನು ಹೊರಗಿನ ಸಂಪರ್ಕವೇ ಇಲ್ಲದಂತೆ ಸೀಲ್ ಮಾಡಿದ್ದಾರೆ. ನಂತರ ಅಡುಗೆ ಮನೆಗೆ ತೆರಳಿ ಗ್ಯಾಸ್ ಓಪನ್ ಮಾಡಿ ಹಾಗೆ ಬಿಟ್ಟಿದ್ದಾರೆ. ಗ್ಯಾಸ್ ಹೊರಗೆ ಹೋಗಲು ಅವಕಾಶವಿಲ್ಲದೇ ವಿಷಾನಿಲವಾಗಿ ಈ ಮೂವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಎರಡು ದಿನಗಳಾದರೂ ಬಾಗಿಲು, ಕಿಟಕಿ ತೆರೆಯದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲನ್ನು ಒಡೆದು ಒಳಪ್ರವೇಶಿಸಿದ್ದಾರೆ. ಒಳಗೆ ಹೋಗಿದ ಕೂಡಲೇ ಅದೃಷ್ಟವಶಾತ್ ತಕ್ಷಣವೇ ಡೆತ್ನೋಟ್ ಮೇಲೆ ಕಣ್ಣಾಯಿಸಿದ್ದಾರೆ. ಈ ಪತ್ರದಲ್ಲಿ ಈ ಮೂವರು ತಾವು ಹೇಗೆ ಸಾವನ್ನಪ್ಪಿದ್ದೀವಿ ಎಂಬುದನ್ನು ಬರೆದುಕೊಂಡಿದ್ದರು. ಇದನ್ನು ತಿಳಿದ ಪೊಲೀಸರೇ ಕೆಲಕಾಲ ಶಾಕ್ಗೆ ಒಳಗಾಗುವಂತಿತ್ತು ಇವರ ಡೆತ್ ನೋಟ್.
ಇನ್ನು ಮಂಜು ಎಂಬ ಮಹಿಳೆ ತನ್ನ ಮಕ್ಕಳಾದ ಅಶಿಂಕಾ ಮತ್ತು ಅಂಕು ಇಬ್ಬರು ಸೇರಿ ಒಟ್ಟು ಮೂವರು ಮೃತಪಟ್ಟಿದ್ದಾರೆ. ಕಳೆದ ವರ್ಷ 2021ರಲ್ಲಿ ಕುಟುಂಬಕ್ಕೆ ಆಧಾರವಾಗಿದ್ದ ಮಹಿಳೆಯ ಪತಿ ಕರೊನಾ ಕಾರಣದಿಂದಾಗಿ ಸಾವನ್ನಪ್ಪಿದ್ದರು. ಅಂದಿನಿಂದ ಈ ಕುಟುಂಬ ತುಂಬಾ ಸಂಕಷ್ಟ ಎದುರಿಸಿತ್ತು.
ಇದರಿಂದಲೇ ಬೇಸತ್ತು ಸಾವನ್ನಪ್ಪಿರಬಹುದೇ ಎಂಬ ಅನುಮಾನ ಈಗ ಪೊಲೀಸರನ್ನು ಕಾಡಿದೆ. ಸಾಯುವ ಮುನ್ನ ಡೆತ್ನೋಟು ಬರೆದಿದ್ದ ಇವರು ಸಾವಿಗೆ ಕಾರಣ ಮಾತ್ರ ಬರೆದಿಲ್ಲ. ಬದಲಾಗಿ ಬಾಗಿಲು ತೆರೆದವರು ದಯವಿಟ್ಟು ಬೆಂಕಿಕಡ್ಡಿ ಗೀರಬೇಡಿ, ಅಪಾಯಕಾರಿ ಗ್ಯಾಸ್ ಇದೆ ಎಂದಷ್ಟೇ ಬರೆದಿದ್ದಾರೆ. ಇನ್ನೂ ಸೂಕ್ತ ತನಿಖೆ ಬಳಿಕವೇ ನಿಖರ ಕಾರಣ ತಿಳಿಯಬಹುದು. (ಏಜೆನ್ಸೀಸ್)