ಯಲಬುರ್ಗಾ: ಕೊಪ್ಪಳ ಏತ ನೀರಾವರಿ ಯೋಜನೆ ಭಾಗವಾದ ಕೆರೆ ತುಂಬಿಸುವ ಯೋಜನೆ ಅನುಮೋದನೆಯಾಗಿದ್ದು ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿಯೇ ಹೊರತು ಇದರಲ್ಲಿ ಸಚಿವ ಹಾಲಪ್ಪ ಆಚಾರ್ ಪಾತ್ರ ಏನೂ ಇಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.
ಹಗೇದಾಳ ಹತ್ತಿರ ಕೃಷ್ಣಾ ಬಿಸ್ಕೀಂ (ನೀರಾವರಿ) ಕೆರೆ ತುಂಬಿಸುವ ಯೋಜನೆಯ ನೀರು ತಾಲೂಕಿನ ಹಗೇದಾಳ ಪಂಪ್ಹೌಸ್ಗೆ ಬಂದ ವಿಷಯಕ್ಕೆ ಸಂಬಂಧಿಸಿ, ಬುಧವಾರ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಕೆಬಿಜೆಎನ್ಎಲ್ (ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತ) ನಿಂದ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿಗೆ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಹಾಗೂ ಸಚಿವ ಆಚಾರ್ ಪತ್ರ ಬರೆದಿದ್ದರು. ಆದರೆ ಈ ಕಾಮಗಾರಿಯನ್ನು ಹಿಂದಿನ ಸಿಎಂ ಸಿದ್ದರಾಮಯ್ಯ ಸರ್ಕಾರ ಹಾಗೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿ, ನೀರಾವರಿ ಮಂತ್ರಿ ಆಗಿದ್ದ ಡಿ.ಕೆ.ಶಿವಕುಮಾರ 78 ಕೆರೆಗಳನ್ನು ತುಂಬಿಸುವ ಯೋಜನೆಗೆ ಆಗಲೇ ಅನುಮೋದನೆ ನೀಡಿದ್ದರು. ಈ ವಿಚಾರ ಹೊಸದೇನಲ್ಲ ಎಂದರು.
ಹಾಲಪ್ಪ ವೋಟಿನ ರಾಜಕಾರಣಕ್ಕಾಗಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ನನ್ನ ಅಭ್ಯಂತರ ಇಲ್ಲ. ಆದರೆ ನೀರಾವರಿ ಮಾಡುವುದಾಗಿ ಹೇಳಿದ್ದ ಆಚಾರ್ ಈಗ ಕೆರೆ ತುಂಬಿಸುವ ಬಗ್ಗೆ ಹೇಳುತ್ತಿದ್ದಾರೆ. ಇದು ಅವರ ದ್ವಿಮುಖ ನೀತಿ ತೋರಿಸುತ್ತದೆ ಎಂದು ಆರೋಪಿಸಿದರು.