ಬೆಂಗಳೂರು: ರೈತರ ಆತ್ಮಹತ್ಯೆಯ ಉಪ ಮುಖ್ಯಮಂತ್ರಿ, ಸಚಿವ ಶಿವಾನಂದ ಪಾಟೀಲ್ ರೈತರ ಜೀವದ ಬಗ್ಗೆ ಉಡಾಫೆ ಮಾತನಾಡಿರುವುದನ್ನು ಇದನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಭಾರತೀಯ ರೈತ ಚಳವಳಿಗಳ ಸಮನ್ವಯ ಸಮಿತಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ರೈತರ ಆತ್ಮಹತ್ಯೆಗೆ ಕೊಡುವ ಪರಿಹಾರದ ಮಾನದಂಡಗಳ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು ಎಂದು ರೈತ ನಾಯಕರಾದ ರಾಕೇಶ್ ಟಿಕಾಯತ್, ಯುದ್ಧವೀರ ಸಿಂಗ್,
ಚುಕ್ಕಿ ನಂಜುಂಡಸ್ವಾಮಿ, ಕೆ.ಟಿ. ಗಂಗಾಧರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರೈತರ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಭಾರತೀಯ ರೈತ ಚಳುವಳಿಗಳ ಸಮನ್ವಯ ಸಮಿತಿಯ 12 ರಾಜ್ಯಗಳನ್ನು ಪ್ರತಿನಿಧಿಸುವ ಸದಸ್ಯ ಸಂಘಟನೆಗಳ ಸಭೆ ಬಳಿಕ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ್ , ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದ ರಾಜ್ಯಗಳ ರಾಜ್ಯ ಸರ್ಕಾರಗಳಿಗೆ ಕೆಲವು ಸಲಹೆ ನೀಡಿದೆ.
ರಾಜ್ಯ ಸರ್ಕಾರಕ್ಕೆ ನೀಡಿದ ಸಲಹೆಗಳು
*ಬೆಳೆ ನಷ್ಟದಿಂದ ಹತಾಶರಾಗಿರುವ ಕರ್ನಾಟಕದ ಕೆಲವು ರೈತರು ಆತ್ಮಹತ್ಯೆ ದಾರಿ ಹಿಡಿದರುವುದರ ಹಿಂದಿರುವ ಕಾರಣಗಳನ್ನು ಪತ್ತೆ ಮಾಡಲು ಅಧ್ಯಯನ ಸಮಿತಿ ರಚಿಸಿ, ಶಾಶ್ವತ ಪರಿಹಾರಗಳನ್ನು ಹುಡುಕುವ ಜವಾಬ್ದಾರಿ ಸಮಿತಿಗೆ ವಹಿಸಬೇಕು.
*ಈಶಾನ್ಯ ದೇಶಗಳಾದ ಪಿಲಿಪೈನ್ಸ್ ಮತ್ತು ಮಲೇಶಿಯಾ ದೇಶಗಳಿಂದ ಕಡಿಮೆ ಸುಂಕದಲ್ಲಿ ಆಮದಾಗುತ್ತಿರುವ ತಾಳೆ ಎಣ್ಣೆಯ ಕಾರಣ ಕರ್ನಾಟಕ, ತಮಿಳುನಾಡು, ಕೇರಳ, ಗೋವಾದ ತೆಂಗು ಬೆಳೆಗಾರರಿಗೆ ಅತಿಯಾದ ನಷ್ಟವಾಗುತ್ತಿದೆ. ಆದ್ದರಿಂದ ಆಹಾರ ಸರಬರಾಜು ಇಲಾಖೆಯು ಕೊಬ್ಬರಿಯನ್ನು ರೈತರಿಂದ ನೇರ ಖರೀದಿಸಬೇಕು. ನಾಫೆಡ್ ಖರೀದಿ ಕೇಂದ್ರ ತಕ್ಷಣ ಪ್ರಾರಂಬಿಸಬೇಕು ಮತ್ತು ರಾಜ್ಯ ಸರ್ಕಾರದ ಬೆಂಬಲ ಬೆಲೆಯನ್ನು 5000ಕ್ಕೆ ಹೆಚ್ಚಿಸಬೇಕು.
* ಕರ್ನಾಟಕ ಸರ್ಕಾರ ಕೆಐಎಡಿಬಿ ಮೂಲಕ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 1777 ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು.
* ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ 2013ರ ಭೂಸ್ವಾಧಿನ ಕಾಯ್ದೆಯ ಅನ್ವಯ ಪರಿಹಾರ ನೀಡಿ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು.
* ಭಾರತ ಸರ್ಕಾರ ಕೃಷಿ ಉತ್ಪನ್ನಗಳಿಗೆ ಸಂಬಂದಿಸಿದಂತೆ ಅನೇಕ ದ್ವಿಪಕ್ಷೀಯ ಮುಕ್ತ ವಾಣಿಜ್ಯ ಒಪಂದಗಳಿಗೆ ಏಕಪಕ್ಷೀಯ ಸಹಿ ಮಾಡುತ್ತಿದ್ದು, ಈ ರೀತಿಯ ಮುಕ್ತ ವಾಣಿಜ್ಯ ಒಪ್ಪಂದಗಳ ಮೇಲೆ ನಿಗಾವಹಿಸಲು ಒಂದು ಡಬ್ಯೂಟಿಒ ವಾಚ್ ಸೆಲ್ ಪ್ರಾರಂಭಿಸಬೇಕು.
* ಕುಲಾತರಿ ಸಾಸಿವೆ ಸೇರಿದಂತೆ ಯಾವುದೇ ಕುಲಾಂತರಿ ಬೆಳೆಗಳ ಪ್ರಯೋಗವನ್ನು ಕಡ್ಡಾಯವಾಗಿ ನಿಷೇಧಿಸಬೇಕು.
* ಅತಿವೃಷ್ಟಿ, ಅನಾವೃಷ್ಟಿಗೆ ಕಾರಣವಾಗಿರುವ ಜಾಗತಿಕ ತಾಪಮಾನ ಮತ್ತು ತೋಟಗಾರಿಕಾ ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವ ಬಗ್ಗೆ ಗಂಭೀರವಾದ ಅದ್ಯಯನ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಹವಾಮಾನ ವೈಪರಿತ್ಯದ ಮೇಲೊಂದು ವಾಚ್ ಸೆಲ್ ಪ್ರಾರಂಭಿಸಬೇಕು.