ಗೋಣಿಕೊಪ್ಪ: ನಿವೇಶನರಹಿತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಮೂರು ಬಗರ್ ಹುಕುಂ ಸಮಿತಿ ರಚಿಸಲಾಗಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಟ್ಟು 33 ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ ಮತ್ತು ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು.
ನಾನು ಶಾಸಕನಾದ ಮೇಲೆ ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆಯೇ ಹರಿಸು ಬರುತ್ತಿದೆ. ಅದರಲ್ಲಿ ನಿವೇಶನ ರಹಿತರ ಸಮಸ್ಯೆ ಪ್ರಮುಖವಾದದ್ದು. ಈ ಸಂಬಂಧ ಕಂದಾಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿ ಬಗರ್ ಹುಕುಂ ಸಮಿತಿ ರಚನೆಯಾಯಿತು. ಇದರ ಪರಿಣಾಮ ಪೊನ್ನಂಪೇಟೆಯಲ್ಲಿ 33 ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲಾಗುತ್ತಿದ್ದು, ಒಟ್ಟು 73 ಫಲಾನುಭವಿಗಳನ್ನು ಗುರುತಿಸಲಾಗಿದೆ. ಸದ್ಯದಲ್ಲೇ ಎಲ್ಲರಿಗೂ ಸಾಗುವಳಿ ಚೀಟಿ ನೀಡಲಾಗುವುದು ಎಂದರು.
ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯಡಿ 5 ಫಲಾನುಭವಿಗಳು, ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ಮೂವರು, ಐವರು ಅಂಗವಿಕಲರಿಗೆ ಪೋಷಣಾ ಭತ್ಯೆ, ಸಂಧ್ಯಾ ಸುರಕ್ಷಾ ಯೋಜನೆಯಡಿ ಇಬ್ಬರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಬಗರ್ ಹುಕುಂ ಸಮಿತಿ ಅಧ್ಯಕ್ಷ ಲಾಲಾ ಅಪ್ಪಣ್ಣ, ಸದ್ಯಸರಾದ ತೆರೇಸಾ ವಿಕ್ಟರ್, ಸುಬ್ರಮಣಿ, ತಹಸೀಲ್ದಾರ್ ಎನ್.ಎಸ್.ಪ್ರಶಾಂತ್, ಭೂಮಾಪನಾ ಇಲಾಖೆ ಅಧಿಕಾರಿ ಬಾನಂಗಡ ಅರುಣ ಉಪಸ್ಥಿತರಿದ್ದರು.