ರಾಯಬಾಗ: ಹೊರನಾಡಿನಲ್ಲಿರುವ ಕನ್ನಡಿಗರಿಗೆ ಕರೊನಾ ಲಾಕ್ಡೌನ್ ಬಿಸಿ ತಟ್ಟಿದ್ದು, ಉದ್ಯೋಗ ಅರಸಿ ಗೋವಾಕ್ಕೆ ಹೋಗಿದ್ದ ಮೂರು ಕುಟುಂಬಗಳು ಈಗ ಅನ್ನ, ಆಶ್ರಯಕ್ಕಾಗಿ ಕಣ್ಣೀರು ಸುರಿಸುತ್ತಿವೆ.
ತಾಲೂಕಿನ ನಿಡಗುಂದಿ ಗ್ರಾಮದ ಲಕ್ಷ್ಮಣ ಭಜಂತ್ರಿ ಕುಟುಂಬ ಸೇರಿ ಮೂರು ಕುಟುಂಬಗಳು ಉದ್ಯೋಗ ಅರಸಿ ನೆರೆಯ ಗೋವಾ ರಾಜ್ಯಕ್ಕೆ ತೆರಳಿದ್ದವು. ಆದರೆ, ಲಾಕ್ಡೌನ್ನಿಂದ ಈ ಮೂರೂ ಕುಟುಂಬಗಳು ಅನ್ನ, ಆಹಾರ, ಆಶ್ರಯ ಲಭಿಸದೆ ದಿಕ್ಕೆಟ್ಟಿದ್ದಾರೆ. ತಮಗೆ ಸಹಾಯ ಮಾಡುವಂತೆ ಈ ಕುಟುಂಬಗಳು ಶಾಸಕ ಪಿ.ರಾಜೀವ್ ಅವರಿಗೆ ವಿಡಿಯೋ ಮೂಲಕ ಕೋರಿರುವ ದೃಶ್ಯ ವೈರಲ್ ಆಗಿದೆ.
‘ಉದ್ಯೋಗಕ್ಕಾಗಿ ಗೋವಾಕ್ಕೆ ಬಂದಿದ್ದೆವು. ಆದರೆ, ಲಾಕ್ಡೌನ್ನಿಂದಾಗಿ ಸ್ವಗ್ರಾಮಕ್ಕೆ ಬರಲು ಸಾಧ್ಯವಾಗದೇ ಇಲ್ಲಿಯೇ ಸಿಲುಕಿಕೊಂಡಿದ್ದೇವೆ. ಈಗ ಉದ್ಯೋಗವೂ ಇಲ್ಲ. ಕೈಯಲ್ಲಿದ್ದ ಹಣ ಖರ್ಚಾಗಿದೆ. ದಿನದ ಕೂಲಿಗೂ ಗತಿ ಇಲ್ಲದಾಗಿದೆ. ದಯಮಾಡಿ ಸಹಾಯ ಮಾಡಿ’ ಎಂದು ಶಾಸಕರಿಗೆ ವಿಡಿಯೋ ಮೂಲಕ ಅವರು ಕೇಳಿಕೊಂಡಿದ್ದಾರೆ.
ಈ ವಿಚಾರವಾಗಿ ಶಾಸಕ ರಾಜೀವ ಪ್ರತಿಕ್ರಿಯೆಗಾಗಿ ಅವರ ಮೊಬೈಲ್ಗೆ ರಾತ್ರಿ 8:30ರ ವರೆಗೂ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.