ಬೆಳಗಾವಿ: ಹಿಡಕಲ್ ಜಲಾಶಯ ಹಾಗೂ ಮಲಪ್ರಭಾ ಮತ್ತು ಘಟಪ್ರಭಾ ನದಿಗಳು ತುಂಬಿ ಹರಿದು ಒಂದೇ ಕಡೆ ಸೇರುವುದರಿಂದ ಗೋಕಾಕ ನಗರದ ನೂರಾರು ಮನೆಗಳು ಜಲಾವೃತವಾಗಿವೆ. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಟ್ಟಿರುವ ಕಾರಣ ಗೋಕಾಕ ತಾಲೂಕಿನ ಅಡಿಬಟ್ಟಿ ಗ್ರಾಮ ನಡುಗಡ್ಡೆಯಂತಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
ಅಡಿಬಟ್ಟಿ ಗ್ರಾಮದ ಮನೆಗಳ ಸುತ್ತ ನೀರು ಆವರಿಸುತ್ತಿದ್ದು, 9 ಜನ ಸಿಲುಕಿಕೊಂಡಿದ್ದಾರೆ. ಜನರು ಸುರಕ್ಷಿತ ಸ್ಥಳಕ್ಕೆ ತೆರಳಿದ ವೇಳೆ ಗ್ರಾಮಕ್ಕೆ ಕಳ್ಳರು ನುಗ್ಗುವ ಭೀತಿ ಹಿನ್ನೆಲೆಯಲ್ಲಿ ಅಡಿಬಟ್ಟಿ ಗ್ರಾಮದಲ್ಲಿಯೇ 9 ಜನ ಉಳಿದಿದ್ದರು. ಇವರೆಲ್ಲರೂ ಪ್ರವಾಹಕ್ಕೆ ಸಿಲುಕಿದ್ದು, ಮನೆಯ ಟೆರೆಸ್ ಮೇಲೆ ಕುಳಿತಿದ್ದಾರೆ. ಈ ಯುವಕರ ರಕ್ಷಣೆಗೆ ಗೋಕಾಕ ತಾಲೂಕಾಡಳಿತ ಮುಂದಾಗಿದೆ. ಪ್ರತಿ ಬಾರಿ ಪ್ರವಾಹ ಬಂದಾಗ ಅಡಿಬಟ್ಟಿ ಗ್ರಾಮ ನಡುಗಡ್ಡೆಯಾಗಿ ಮಾರ್ಪಡುತ್ತದೆ.
ಪರಿಹಾರ ಕೇಂದ್ರತ್ತ ಹೆಜ್ಜೆ: ಬೆಳಗಾವಿ ನಗರದಲ್ಲಿ ಬುಧವಾರ ಬೆಳಗ್ಗೆಯಿಂದ ಬಿಡುವು ನೀಡಿದ್ದ ಮಳೆ, ಮಧ್ಯಾಹ್ನದ ವೇಳೆ ಅರ್ಧ ಗಂಟೆಯಷ್ಟು ಕಾಲ ಮಾತ್ರ ಸುರಿಯಿತು. ಆದರೆ, ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಗರದ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದೆ. ಮಳೆ ನಿಂತರೂ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಕಡಿಮೆಯಾಗಿಲ್ಲ. ಹೀಗಾಗಿ ಸದ್ಯ ನದಿ ತೀರದ ಜನರು, ತಮ್ಮ ಜಾನುವಾರು ಮತ್ತು ಮನೆಯ ಸಾಮಗ್ರಿಗಳೊಂದಿಗೆ ಪರಿಹಾರ ಕೇಂದ್ರಗಳತ್ತ ಮುಖ ಮಾಡಿದ್ದಾರೆ.