ಬೆಳಗಾವಿ: ಕ್ಷೇತ್ರದಲ್ಲಿ ಮಾಡುತ್ತಿರುವ ಅಭಿವೃದ್ಧಿ ಕೆಲಸವನ್ನು ಸಹಿಸದವರಿಂದ ನಿತ್ಯ ಸಂಕಷ್ಟ, ಸಂಘರ್ಷ ಎದುರಾಗುತ್ತಲಿದೆ. ಆದರೆ, ಕ್ಷೇತ್ರದ ಜನರಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇನೆ. ಮುಂದೆ ಎಷ್ಟೇ ಕಷ್ಟ ಬಂದರೂ ಎದುರಿಸಲು ಸಿದ್ಧ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುಳೇಭಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚುವರಿ ಯಾಗಿ 50 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಶಾಸಕಿಯಾದ ನಂತರ ಇಷ್ಟೊಂದು ಸಂಕಷ್ಟ ಎದುರಾಗುತ್ತದೆಂದು ಭಾವಿಸಿರಲಿಲ್ಲ. ಜನರಿಗಾಗಿ ಕೆಲಸ ಮಾಡುವುದನ್ನೂ ಸಹಿಸಿಕೊಳ್ಳದಿದ್ದರೆ ತಾವೇನು ಮಾಡಲು ಸಾಧ್ಯ. ಒಳ್ಳೆಯ ಕೆಲಸ ಮಾಡುವುದನ್ನು ಸಹಿಸಿಕೊಳ್ಳದವರನ್ನು ಏನನ್ನಬೇಕು ಎಂದರು.
ಕ್ಷೇತ್ರದ ಜನರ ದೊಡ್ಡ ಶಕ್ತಿ ತಮ್ಮ ಜತೆಗಿರುವಾಗ ತಾವೇಕೆ ಅಳುಕಬೇಕು ಎಂದು ಪ್ರಶ್ನಿಸಿಕೊಂಡ ಅವರು, ರಾಜಕೀಯ ಚುನಾವಣೆ ಸಂದರ್ಭದಲ್ಲಿರಬೇಕು. ಚುನಾವಣೆ ನಂತರ ಅಭಿವೃದ್ಧಿಯಲ್ಲಿ ಪೈಪೋಟಿ ಮಾಡೋಣ. ಒಬ್ಬರಿಗಿಂತ ಒಬ್ಬರು ಹೆಚ್ಚು ಕೆಲಸಗಳನ್ನು ತರುವುದಕ್ಕೆ ಪ್ರಯತ್ನಿಸೋಣ. ಆದರೆ, ಅದರಲ್ಲೂ ರಾಜಕೀಯ ನೋಡಿ ಬೇಜಾರಾಗುತ್ತಿದೆ. ಅಂತಹವರನ್ನು ಜನರು ಮತ್ತು ದೇವರೇ ನೋಡಿಕೊಳ್ಳುತ್ತಾನೆ. ನಾನು ಹೆಚ್ಚು ತಲೆಕೆಡಿಸಿಕೊಳ್ಳದೆ ಕ್ಷೇತ್ರದ ಅಭಿವೃದ್ಧಿ ಕೆಲಸ ಮುಂದುವರಿಸುತ್ತೇನೆ ಎಂದರು. ಹಿರಿಯರು, ಗ್ರಾಪಂ ಸದಸ್ಯರು ಹಾಗೂ ಸ್ಥಳೀಯ ಕಾರ್ಯಕರ್ತರು ಇದ್ದರು.