ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಮಳೆ-ಗಾಳಿಗೆ ಮನೆಯ ಛಾವಣಿ ಹಾರಿ ಹೋಗಿದ್ದು, 13ಕ್ಕೂ ಹೆಚ್ಚು ತೆಂಗಿನ ಮರಗಳು ನೆಲಕ್ಕುರುಳಿವೆ.
ಮತಿಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ದಿಡ್ಡಮ್ಮ ದೇವಸ್ಥಾನದ ಬಳಿಯ ಸಣ್ಣಪ್ಪ ಎಂಬುವರ ಮನೆಯ ಛಾವಣಿ ಹಾಗೂ ಪಕ್ಕದಲ್ಲಿರುವ ಟ್ರ್ಯಾಕ್ಟರ್ ಶೆಡ್ನ ಕಬ್ಬಿಣದ ಶೀಟ್ ಹಾರಿ ಪಕ್ಕದ ಜಮೀನಿನಲ್ಲಿ ಬಿದ್ದಿವೆ.
ಮನೆಯಲ್ಲಿ ಮಲಗಿದ್ದ ಸಣ್ಣಪ್ಪ ಹಾಗೂ ಅವರ ಕುಟುಂಬ ಅಪಾಯದಿಂದ ಪಾರಾಗಿದ್ದು, ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶ್, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಿ.ಜಿ.ಕೊಪ್ಪಲು ಗ್ರಾಮದ ಬಿ.ಎಂ.ರಂಗಪ್ಪ ಹಾಗೂ ಇತರರ ತೋಟಗಳಲ್ಲಿ 10ಕ್ಕೂ ಹೆಚ್ಚು ತೆಂಗಿನ ಮರಗಳು ನೆಲಕ್ಕೆ ಉರುಳಿವೆ. ಪಕ್ಕದ ರಂಗೇನಹಳ್ಳಿಯಲ್ಲಿ 3 ತೆಂಗಿನ ಮರಗಳು ಬಿದ್ದಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ತಿಳಿಸಿದ್ದಾರೆ.