ಬೆಂಗಳೂರು: ದೇಶದ ವಿಮಾನಯಾನ ಸೇವಾ ಕ್ಷೇತ್ರದಲ್ಲಿ ಪ್ರಥಮ ಸ್ಥಾನಪಡೆಯುವತ್ತ ರಾಜ್ಯ ಮುನ್ನುಗುತ್ತಿದ್ದು, ಕಲಬುರಗಿ ನಂತರ ಇದೀಗ ರಾಜ್ಯದ ಐದು ನಗರಗಳಲ್ಲಿ ಮುಂದಿನ 2 ವರ್ಷಗಳಲ್ಲಿ ವಿಮಾನಯಾನ ಸೇವೆ ಆರಂಭವಾಗಲಿದೆ.
ನಾಗರಿಕ ವಿಮಾನಯಾನ ಇಲಾಖೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಂಗ್ಸ್ ಇಂಡಿಯಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ಸಿಂಗ್ ಖರೋಲಾ ರಾಜ್ಯದ ಎಲ್ಲ ಭಾಗಗಳಲ್ಲೂ ವಿಮಾನನಿಲ್ದಾಣವನ್ನು ನಿರ್ವಿುಸಲಾಗುತ್ತಿದೆ. ವಿಜಯಪುರ, ಶಿವಮೊಗ್ಗ, ಕಾರವಾರ, ಚಿಕ್ಕಮಗಳೂರು ಮತ್ತು ಬೀದರ್ ನಗರಗಳಲ್ಲಿ ಮುಂದಿನ 2 ವರ್ಷದಲ್ಲಿ ವಿಮಾನಯಾನ ಸೇವೆ ಆರಂಭಿಸಲಾಗುತ್ತದೆ ಎಂದು ಹೇಳಿದರು.
5 ವರ್ಷದಲ್ಲಿ 40 ನಿಲ್ದಾಣದಲ್ಲಿ ಸೇವೆ: ದೇಶದಲ್ಲಿ ವಿಮಾನಯಾನ ಸೇವೆ ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡಲಾಗುತ್ತಿದೆ. ಕಳೆದ 5 ವರ್ಷದಲ್ಲಿ ದೇಶದ 40 ವಿಮಾನನಿಲ್ದಾಣಗಳಲ್ಲಿ ವಿಮಾನಯಾನ ಸೇವೆಗೆ ಚಾಲನೆ ನೀಡಲಾಗಿದೆ. ಮುಂದಿನ 5 ವರ್ಷದಲ್ಲಿ ಆ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುತ್ತದೆ. ಅದರ ಜತೆಗೆ ವಿಮಾನನಿಲ್ದಾಣ ಮತ್ತು ಹೆಲಿಪ್ಯಾಡ್ಗಳ ನಿರ್ವಣವನ್ನು ಹೆಚ್ಚಿಸಲಾಗುವುದು ಎಂದರು.
ರಾಜ್ಯ ಸರ್ಕಾರವೂ ಸಿದ್ಧವಿದೆ: ರಾಜ್ಯದ ಇತರ ಕಡೆ ವಿಮಾನಯಾನ ಸೇವೆ ಆರಂಭಿಸುವ ಕುರಿತಂತೆ ಪ್ರತಿಕ್ರಿಯಿಸಿರುವ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ವಿಮಾನನಿಲ್ದಾಣ ಪ್ರಾಧಿಕಾರದ ಸಹಯೋಗದಲ್ಲಿ ಮುಂದಿನ 2 ವರ್ಷಗಳಲ್ಲಿ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.