ಬೆಂಗಳೂರು ಗ್ರಾಮಾಂತರ : 2021-22ನೇ ಸಾಲಿನ ಪ್ರಸಕ್ತ ವರ್ಷದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಲ ಯೋಜನೆಯಲ್ಲಿ 460 ಕೋಟಿ ರೂ. ಹೆಚ್ಚಳ ಮಾಡುವ ಮೂಲಕ 4 ಸಾವಿರ ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿದ್ದು, ಇದರಲ್ಲಿ ಅಗ್ರಸ್ಥಾನವನ್ನು ಕೃಷಿಕ್ಷೇತ್ರಕ್ಕೆ ಮೀಸಲಿರಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆನರಾ ಬ್ಯಾಂಕ್ ಹಾಗೂ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್) ಸಹಯೋಗದಲ್ಲಿ ದೇವನಹಳ್ಳಿ ತಾಲೂಕು ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಸಕ್ತ ಆರ್ಥಿಕ ವರ್ಷದ ಜಿಲ್ಲಾ ಸಾಲ ಯೋಜನೆ ಸಭೆಯಲ್ಲಿ ಮಾತನಾಡಿ, ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಬ್ಯಾಂಕ್ ವ್ಯವಸ್ಥಾಪಕ ಎಂ.ಸಿ.ಮಧುಸೂಧನ ಮಾತನಾಡಿ, ಈ ವರ್ಷದ ಸಾಲ ಯೋಜನೆಯು 2020-21ರ ಸಾಲಿಗಿಂತ 460 ಕೋಟಿ ರೂ.ಹೆಚ್ಚಿನ ಮೊತ್ತವನ್ನು ಹೊಂದಿದ್ದು, ಆದ್ಯತಾ ವಲಯಕ್ಕೆ 3650 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಆದ್ಯತಾ ವಲಯದ ಒಟ್ಟು ಮೊತ್ತದ ಶೇ.83 ಕೃಷಿ ಕ್ಷೇತ್ರಕ್ಕೆ ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಕಾಯ್ದಿರಿಸಲಾಗಿದ್ದು, 1992 ಕೋಟಿ ರೂ.ಗಳನ್ನು ಕೃಷಿ ಕ್ಷೇತ್ರಕ್ಕೆ ಹಾಗೂ 1054 ಕೋಟಿ ರೂ.ಗಳನ್ನು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನಿಗದಿಗೊಳಿಸಲಾಗಿದೆ ಎಂದರು.
2021-22ರ ಜಿಲ್ಲಾ ಸಾಲ ಯೋಜನೆಯು ಸರ್ಕಾರಿ ಇಲಾಖೆಗಳ ಸಹಕಾರದೊಂದಿಗೆ ಮತ್ತು ಸ್ಥಳೀಯ ಸಂಪನ್ಮೂಲದ ಸಾಮರ್ಥ್ಯಕ್ಕನುಗುಣವಾಗಿ ಜಿಲ್ಲೆಯ ಮುಖ್ಯ ಆದ್ಯತಾ ವಲಯಗಳಿಗೆ ನೆರವು ನೀಡುವುದರೊಂದಿಗೆ ಎಲ್ಲ ವರ್ಗಗಳ ಫಲಾನುಭವಿಗಳಿಗೆ ಸೂಕ್ತ ಆರ್ಥಿಕ ನೆರವು ಒದಗಿಸಲು ಸಹಕಾರಿಯಾಗಲಿದೆಯೆಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಡಾ. ಜಗದೀಶ.ಕೆ.ನಾಯಕ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೃಷಿಚಟುವಟಿಕೆಗಳ ಉತ್ತೇಜನಕ್ಕೆ ಹಾಗೂ ಕೃಷಿ ಉತ್ಪಾದನೆ ಹೆಚ್ಚುಸುವ ಸಲುವಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ, ಈ ಬಗ್ಗೆ ಲಾನುಭವಿಗಳು ಮಾಹಿತಿ ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇವನಹಳ್ಳಿ ತಾಲೂಕು ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಸಕ್ತ ಆರ್ಥಿಕ ವರ್ಷದ ಜಿಲ್ಲಾ ಸಾಲ ಯೋಜನೆ ಸಭೆಯಲ್ಲಿ ಸಿಇಒ ರವಿಕುಮಾರ್, ಎಡಿಸಿ ಜಗದೀಶ್ ಕೆ.ನಾಯಕ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ, ತಹಸೀಲ್ದಾರ್, ಎಂ.ವಿಜಯಕುಮಾರ ಮತ್ತಿತರರು ಇದ್ದರು.