ತುಮಕೂರು: ರಾಜ್ಯದ ಪ್ರಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಚಾರಿ ನೇತ್ರ ಚಿಕಿತ್ಸಾಲಯಕ್ಕೆ ನಗರದ ಸರ್ಕಾರಿ ಎಂಪ್ರೆಸ್ ಪಾಠಶಾಲೆಯಲ್ಲಿ ಗುರುವಾರ ಚಾಲನೆ ನೀಡಲಾಯಿತು.
ಪಾವಗಡ ರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್ ಸಂಸ್ಥೆ ಸಹಯೋಗದಲ್ಲಿ 1.30ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗಿರುವ ಸಂಚಾರಿ ನೇತ್ರ ಚಿಕಿತ್ಸಾಲಯದ ನಿರ್ವಹಣೆಯ ಹೊಣೆಯನ್ನು ಪಾವಗಡದ ಶ್ರೀಶಾರದಾದೇವಿ ಸಂಚಾರಿ ಕಣ್ಣಿನ ಆಸ್ಪತ್ರೆ ವಹಿಸಿಕೊಂಡಿದೆ.
ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಮಾತನಾಡಿ, ಇನ್ಫೋಸಿಸ್ ಸಂಸ್ಥೆಯವರ ಸಹಕಾರದೊಂದಿಗೆ ಈ ಕ್ರಾಂತಿಕಾರಿ ಯೋಜನೆ ರೂಪಿಸಲಾಗಿದ್ದು, ಸದುಪಯೋಗ ಪಡೆಯಬೇಕು ಎಂದರು.
ದೇಶದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಒಬ್ಬರು ನೇತ್ರ ತಜ್ಞರಿದ್ದಾರೆ, ಕಣ್ಣಿನ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ತಮಗೆ ತರಗತಿಯಲ್ಲಿ ಬೋರ್ಡ್ ಮೇಲೆ ಬರೆದ ಅಕ್ಷರಗಳು ಕಾಣುವುದಿಲ್ಲ ಎಂದಾದಲ್ಲಿ ತಕ್ಷಣ ಶಿಕ್ಷಕರಿಗೆ, ಪಾಲಕರಿಗೆ ತಿಳಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು. ಕಣ್ಣಿನ ತೊಂದರೆಯಿಂದ ಬಳಲುವವರಿಗಾಗಿಯೇ ಸಂಚಾರಿ ಕಣ್ಣಿನ ಆಸ್ಪತ್ರೆ ಪ್ರಾರಂಭ ಮಾಡಲಾಗಿದೆ.
ಕಣ್ಣಿನ ತಪಾಸಣೆ, ಚಿಕಿತ್ಸೆ ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ದೂರ ತರಂಗ ಶಿಕ್ಷಣ ಯೋಜನೆಯಡಿಯಲ್ಲಿ ಶಾಲೆಗಳಿಗೆ ನೂತನ ಕಲಿಕಾ ಯಂತ್ರೋಪಕರಣಗಳನ್ನು ನೀಡಲಾಗುವುದು ಎಂದರು. ಟೂಡಾ ಅಧ್ಯಕ್ಷ ಚಂದ್ರಶೇಖರ್, ಡಿಎಚ್ಒ ಡಾ.ಮಂಜುನಾಥ್ ಇದ್ದರು.
ಶಿಕ್ಷಣದಲ್ಲಿ ಉತ್ತಮ ವಿಷಯಗಳನ್ನು ಮಕ್ಕಳಿಗೆ ಪರಿಚಯಿಸಿ ಮಾತಾಪಿತೃಗಳು ಮಕ್ಕಳಿಗೆ ಶಿಕ್ಷಣದ ಜತೆಗೆ ಆರೋಗ್ಯವೂ ಮುಖ್ಯವಾದದ್ದು ಎಂಬ ಜವಾಬ್ದಾರಿ ತಿಳಿಸಬೇಕು. ಸರ್ಕಾರ ಮಾಡುಬಹುದಾದ ಕೆಲಸಗಳನ್ನು ಪಾವಗಡದ ಜಪಾನಂದಜೀ ಮಾಡುತ್ತಿದ್ದಾರೆ.
| ಜಿ.ಬಿ.ಜ್ಯೋತಿಗಣೇಶ್ ಶಾಸಕ