ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ರಚಿಸಲಾಗಿರುವ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಮೊದಲ ಸಭೆ ಬುಧವಾರ ನಡೆಯಲಿದೆ.
ಟ್ರಸ್ಟ್ನ ಅಧ್ಯಕ್ಷರಾಗಿರುವ ಹಿರಿಯ ವಕೀಲ ಕೆ.ಪರಾಶರನ್ ಅವರ ನಿವಾಸದಲ್ಲೇ ಈ ಸಭೆ ನಡೆಯುವ ಸಾಧ್ಯತೆ ಇದೆ. ಮಂದಿರ ನಿರ್ವಣದ ಶಂಕುಸ್ಥಾಪನೆಯ ಮುಹೂರ್ತದ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ನಿರ್ಮಾಣ ಸಾಮಗ್ರಿಗಳ ಸಾಗಣೆ, ಮಂದಿರ ನಿರ್ವಣಕ್ಕೆ ನಿಧಿ ಸಂಗ್ರಹ ಮತ್ತು ಮಂದಿರ ಕಾಮಗಾರಿ ಮುಗಿಯಬೇಕಾದ ದಿನಾಂಕ ಕುರಿತು ಚರ್ಚೆ ಸಭೆಯ ಕಾರ್ಯಸೂಚಿಯಲ್ಲಿ ಇದೆ. ದೇಣಿಗೆ ಸಂಗ್ರಹ ಪಾರದರ್ಶಕವಾಗಿ ಮತ್ತು ವಿವಾದರಹಿತವಾಗಿರಬೇಕು ಎಂಬ ನಿಟ್ಟಿನಲ್ಲಿ ಟ್ರಸ್ಟ್ನ ಸದಸ್ಯರು ಚರ್ಚೆ ನಡೆಸಲಿದ್ದಾರೆ. ಮಂದಿರ ನಿರ್ಮಾಣ ಕಾರ್ಯ ಕಾಲಮಿತಿಯಲ್ಲಿ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹೇಳಿದ್ದಾರೆ. ಈ ಸಲಹೆಯನ್ನು ಟ್ರಸ್ಟ್ ಕೂಡ ಗಂಭೀರವಾಗಿ ಪರಿಶೀಲಿಸಲಿದೆ ಎಂದು ಮೂಲಗಳು ಹೇಳಿವೆ.
ರಾಮ ಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ವಿವಾದದ ಬಗ್ಗೆ ಕಳೆದ ನ.9ರಂದು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್, ವಿವಾದಿತ ಜಾಗವನ್ನು ರಾಮಲಲ್ಲಾಗೆ ನೀಡಿತ್ತು. ಮೂರು ತಿಂಗಳಲ್ಲಿ ಟ್ರಸ್ಟ್ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಮಸೀದಿ ನಿರ್ವಣಕ್ಕೆ ಮುಸ್ಲಿಮರಿಗೆ ಅಯೋಧ್ಯೆಯಲ್ಲಿ ಐದು ಎಕರೆ ಜಾಗ ನೀಡುವಂತೆಯೂ ಸೂಚಿಸಿತು.