ನವದೆಹಲಿ: ಕೇರಳದ ಚಿನ್ನ ಕಳ್ಳಸಾಗಣೆ ವಿವಾದ ದಿನೇದಿನೆ ಹೊಸ ತಿರುವು ಪಡೆದಯುತ್ತಿದೆ. ಅನ್ಲಾಫುಲ್ ಆ್ಯಕ್ಟಿವಿಟೀಸ್(ಪ್ರಿವೆನ್ಶನ್) ಆ್ಯಕ್ಟ್ 1967 ಪ್ರಕಾರ ಈ ಪ್ರಕರಣದ ಎಫ್ಐಆರ್ ದಾಖಲಿಸಿರುವುದಾಗಿ ಕೇಂದ್ರ ಸರ್ಕಾರ ಕೇರಳ ಹೈಕೋರ್ಟ್ಗೆ ಮಾಹಿತಿ ನೀಡಿದೆ. ಇದರಂತೆ ಸ್ವಪ್ನಾ ಸುರೇಶ್ ಪ್ರಮುಖ ಆರೋಪಿ. ಅವರ ವಿರುದ್ಧ ಭಯೋತ್ಪಾದನಾ ಚಟುವಟಿಕೆಗೆ ನಿಧಿ ಸಂಗ್ರಹಿಸಿದ ಆರೋಪವೂ ಉಲ್ಲೇಖವಾಗಿದೆ.
ಕೇರಳ ಹೈಕೋರ್ಟ್ನಲ್ಲಿ ಶುಕ್ರವಾರ ಮುಖ್ಯ ಆರೋಪಿ ಸ್ವಪ್ನಾ ಸುರೇಶ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ವಿದ್ಯಮಾನ ನಡೆದಿದೆ. ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ(ಎನ್ಐಎ) ಸಲ್ಲಿಸಿರುವ ಹೊಸ ಎಫ್ಐಆರ್ನಲ್ಲಿ ಯುಎಪಿಎ ಕಾಯ್ದೆಯ ಅಂಶಗಳು ದಾಖಲಾಗಿದೆ. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಸರ್ಕಾರ ಗುರುವಾರ (ಜು.9) ಒಪ್ಪಿಗೆ ನೀಡಿತ್ತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಂಬಂಧ ಬುಧವಾರ (ಜು.8) ಪತ್ರ ಬರೆದು, ಪರಿಣಾಮಕಾರಿ ಮತ್ತು ಸಮನ್ವಯದ ತನಿಖೆ ನಡೆಸುವಂತೆ ಕೋರಿದ್ದರು. ಇದರಂತೆ ಎನ್ಐಎ ತನಿಖೆ ಶುರುವಾಗಿದೆ.
ಇದನ್ನೂ ಓದಿ: ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!
ಶುಕ್ರವಾರದ ವಿಚಾರಣೆಯಲ್ಲೇನಾಯಿತು?: ಲೈವ್ ಲಾ ವರದಿ ಪ್ರಕಾರ, ಸ್ವಪ್ನಾ ಸುರೇಶ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಕೇಂದ್ರ ಸರ್ಕಾರದ ಪ್ರತಿನಿಧಿ ಆಕ್ಷೇಪ ವ್ಯಕ್ತಪಡಿಸಿದರು. ಈ ಕೇಸ್ ಎನ್ಐಎಗೆ ಹಸ್ತಾಂತರಿಸಲ್ಪಟ್ಟಿರುವ ಕಾರಣ, ಈ ಪ್ರಕರಣದ ವಿಚಾರಣಾ ವ್ಯಾಪ್ತಿ ಇನ್ನು ಎನ್ಐಎ ಕೋರ್ಟ್ಗೆ ಸೇರಿದ್ದು. ಅಲ್ಲೇ ಇವೆಲ್ಲವೂ ನಿರ್ಧಾರವಾಗಬೇಕು. ಎನ್ಐಎ ಕಾಯ್ದೆಯ ಸೆಕ್ಷನ್ 21 ಇದನ್ನು ಹೇಳುತ್ತಿದೆ. ಹೈಕೋರ್ಟ್ನಲ್ಲಿ ಅಪೀಲು ಸಲ್ಲಿಸಿದರಷ್ಟೇ ಅಂಥ ಅಪೀಲುಗಳ ವಿಚಾರಣೆ ನಡೆಸಬಹುದು ಎಂದು ಕೇಂದ್ರ ಸರ್ಕಾರದ ಪರ ಪ್ರತಿನಿಧಿ ವಾದ ಮಂಡಿಸಿದರು.
ಇದನ್ನೂ ಓದಿ: ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!
ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸ್ವಪ್ನಾ ಸುರೇಶ್ ಅವರ ನಡವಳಿಕೆ ಸಂದೇಹಾಸ್ಪದವಾಗಿದೆ. ಈ ಪ್ರಕರಣದಲ್ಲಿ ಆಕೆಯ ಪಾಲುದಾರಿಕೆ ಯಾವ ಪ್ರಮಾಣದ್ದು ಅಥವಾ ಅವರು ಮುಗ್ಧರೇ ಎಂಬುದರ ಸ್ಪಷ್ಟತೆಗಾಗಿ ಇದು ಅನಿವಾರ್ಯ. ಕಸ್ಟಮ್ಸ್ ಅಧಿಕಾರಿಗಳು ಕೂಡ ಆಕೆಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ಆಕೆ ತಲೆಮರೆಸಿಕೊಂಡಿದ್ದಾರೆ. ಕೇಂದ್ರ ಸರ್ಕಾರವೂ ಸ್ವಪ್ನಾ ವಿರುದ್ಧ ಬೇರೆ ಕೇಸ್ಗಳೊಂದಿಗೆ ತನಿಖೆಗೆ ಮುಂದಾಗಿದೆ. ಯುಎಪಿಎ ಪ್ರಕಾರ ಉಗ್ರ ಕೃತ್ಯಕ್ಕೆ ಸಂಬಂಧಿಸಿದ ಆರೋಪ ಇರುವ ಕಾರಣ, ಆಕೆಗೆ ಜಾಮೀನು ನೀಡಬಾರದು ಎಂದು ಕೇಂದ್ರ ಸರ್ಕಾರದ ಪರ ಪ್ರತಿನಿಧಿ ವಾದ ಮಂಡಿಸಿದರು.
ಇದನ್ನೂ ಓದಿ: 30 ಕೆ.ಜಿ ಚಿನ್ನ ಕಳ್ಳಸಾಗಣೆ ಹಿಂದೆ ಇದ್ದದ್ದು ಈ ಪ್ರಭಾವಿ ಮಹಿಳೆ
ಕಸ್ಟಮ್ಸ್ ಅಧಿಕಾರಿಗಳ ಹೇಳಿಕೆ, ಹೊಸ ಎನ್ಐಎ ಎಫ್ಐಆರ್ ಪ್ರತಿಗಳು ಇನ್ನಷ್ಟೇ ಸ್ವಪ್ನಾ ಸುರೇಶ್ ಅವರ ವಕೀಲರಿಗೆ ಸಿಗಬೇಕಾಗಿದೆ. ಅದನ್ನು ನೋಡಿಕೊಂಡು ಅವರು ಪ್ರತಿಕ್ರಿಯೆ ನೀಡಬೇಕು. ಹೀಗಾಗಿ ವಿಚಾರಣೆಯನ್ನು ಕೋರ್ಟ್ ಜುಲೈ 14ಕ್ಕೆ ಮುಂದೂಡಿದೆ. (ಏಜೆನ್ಸೀಸ್)
ಅಜ್ಞಾತ ಸ್ಥಳದಿಂದಲೇ ಆಡಿಯೋ ಕಳಿಸಿ ಮನದಾಳ ತೆರೆದಿಟ್ಟ ‘ಗೋಲ್ಡ್ ಕ್ವೀನ್’