ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ಗೆ ಸಂಕಷ್ಟ ಎದುರಾಗಿದ್ದು, ಹರಿಯಾಣ ಪೊಲೀಸರು ಯುವಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 2020ರಲ್ಲಿ ಇನ್ಸ್ಟಾಗ್ರಾಂನಲ್ಲಿ ನಡೆದ ಚರ್ಚೆಯ ಮೇಲೆ ದಲಿತ ಸಮುದಾದಯ ಬಗ್ಗೆ ಅಗೌರವ ಮತ್ತು ಅಸಹ್ಯಕರ ಮಾತುಗಳನ್ನಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಹಿಸಾರ್ನ ಹನ್ಸಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಯುವಿ ವಿರುದ್ಧ ಎಫ್ಐಆರ್ ಆಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) 153, 153A, 295, 505 ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಇಷ್ಟೇ ಅಲ್ಲದೆ, ಎಸ್ಸಿ/ಎಸ್ಟಿ ಕಾಯ್ದೆಯ 3(1) (r) ಮತ್ತು 3 (1) (s) ಸೆಕ್ಷನ್ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ. ಹಿಸಾರ್ ಮೂಲದ ವಕೀಲರೊಬ್ಬರು ಯುವರಾಜ್, ಜಾತಿವಾದಿ ಕಾಮೆಂಟ್ ಮಾಡಿದ್ದಾರೆಂದು ದೂರು ನೀಡಿದ 8 ತಿಂಗಳ ಬಳಿಕ ಎಫ್ಐಆರ್ ಮಾಡಲಾಗಿದೆ.
2020ರ ಜೂನ್ ತಿಂಗಳಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಜತೆಗಿನ ಇನ್ಸ್ಟಾಗ್ರಾಂ ಲೈವ್ ಚರ್ಚೆಯಲ್ಲಿ ಯುವರಾಜ್ ಜಾತಿವಾದಿ ಕಾಮೆಂಟ್ ಮಾಡಿರುವ ಆರೋಪವಿದೆ. ಅಲ್ಲದೆ, ಕ್ಷಮೆಯನ್ನು ಕೇಳಿರುವ ಯುವಿ, ನಾನೆಂದಿಗೂ ಅಸಮಾನತೆಯನ್ನು ನಂಬುವುದಿಲ್ಲ ಎಂದಿದ್ದಾರೆ.
ಉದ್ಧೇಶಪೂರ್ವಕವಲ್ಲದೆ ಒಂದು ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಈ ಹಿಂದೆಯೇ ಯುವಿ ಟ್ವೀಟ್ ಮಾಡಿದ್ದರು. ಯಾವುದೇ ರೀತಿಯ ಅಸಮಾನತೆಯನ್ನು ನಾನು ನಂಬುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತೇನೆ. ಬಣ್ಣ, ಜಾತಿ, ಧರ್ಮ ಅಥವಾ ಲಿಂಗ ಯಾವುದೇ ಇರಲಿ ತಾರತಮ್ಯ ಮಾಡುವುದಿಲ್ಲ. ಜನರ ಕಲ್ಯಾಣಕ್ಕಾಗಿ ನನ್ನ ಜೀವನವನ್ನು ನಿರಂತರವಾಗಿ ಮುಡಿಪಾಗಿಡುತ್ತೇನೆ. ನಾನು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಘನತೆಯನ್ನು ನಂಬುತ್ತೇನೆ ಮತ್ತು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ‘ಮೊಮ್ಮಗಳ ಆಸೆಗಾಗಿ ಮನೆ ಮಾರಿದೆ, ಈಗ ಈ ಆಟೋದಲ್ಲೇ ನನ್ನ ಜೀವನ’ ಕಣ್ಣೀರು ತರಿಸುತ್ತೆ ಈ ಅಜ್ಜನ ಕಥೆ
ನನ್ನ ಸ್ನೇಹಿತನ ಜತೆ ಸಂವಹನ ನಡೆಸುವಾಗ ನಾನು ತಪ್ಪಾಗಿ ಅರ್ಥ ಮಾಡಿಕೊಂಡೆ, ಅದು ಅನಗತ್ಯವಾಗಿತ್ತು. ಆದಾಗ್ಯು ಜವಾಬ್ದಾರಿಯುತ ಭಾರತೀಯನಾಗಿ ನಾನು ಯಾರೊಬ್ಬರ ಭಾವನೆಗಳನ್ನು ಉದ್ಧೇಶರಹಿತವಾಗಿ ನೋಯಿಸಿದ್ದರೆ, ಅದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸಲು ಬಯಸುತ್ತೇನೆ ಎಂದಿದ್ದರು.
ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರ ಟಿಕ್ಟಾಕ್ ವಿಡಿಯೋಗಳ ಕುರಿತು ಮಾತನಾಡುವಾಗ ಯುವಿ ಜಾತಿವಾದಿ ಕಾಮೆಂಟ್ ಮಾಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್)
ಐಪಿಎಲ್ ಹರಾಜಿಗೆ ಮುನ್ನ ಆಲ್ರೌಂಡ್ ಆಟವಾಡಿ ಮಿಂಚಿದ ಸಚಿನ್ ಪುತ್ರ ಅರ್ಜುನ್