ನವದೆಹಲಿ: ಲಾಕ್ಡೌನ್ ಇದ್ದರೂ ವಲಸೆ ಕಾರ್ಮಿಕರು ಗುಂಪುಗುಂಪಾಗಿ ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿದ್ದಾರೆ. ಅದರಲ್ಲೂ ದೆಹಲಿಯಿಂದ ಉತ್ತರ ಪ್ರದೇಶದ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.
ಇದೇ ವಲಸೆ ವಿಚಾರವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅನುಚಿತವಾಗಿ ಮಾತನಾಡಿದ ಆಮ್ ಆದ್ಮಿ ಪಕ್ಷ (ಆಪ್)ದ ಶಾಸಕನೋರ್ವನ ವಿರುದ್ಧ ನೊಯ್ಡಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೆಹಲಿ ರಾಜಿಂದರ್ ನಗರದ ಆಪ್ ಶಾಸಕ ರಾಘವ್ ಚಾಧಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವ ವಿಚಾರವನ್ನೇ ಇಟ್ಟುಕೊಂಡು ಯೋಗಿ ಅವರ ಮಾನ ಹಾನಿ ಮಾಡಿದ್ದಾರೆ ಎಂದು ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಪಟೇಲ್ ಎಂಬುವರು ದೂರು ನೀಡಿದ್ದರು.
ಟ್ವೀಟ್ನಿಂದ ವಿವಾದ ಸೃಷ್ಟಿಯಾಗುತ್ತಿದ್ದಂತೆ ಅದನ್ನು ಶಾಸಕ ಡಿಲೀಟ್ ಮಾಡಿದ್ದರು.
ಶಾಸಕನ ವಿರುದ್ಧ ಎಫ್ಐಆರ್ ದಾಖಲಾದ ಮೇಲೆ ನಾನು ಡಿಜಿಪಿ ಮತ್ತು ಪೊಲೀಸ್ ಆಯುಕ್ತರಿಗೆ ಇಮೇಲ್ ಕಳಿಸಿದ್ದೇನೆ. ಅನಗತ್ಯ ಹೇಳಿಕೆ ನೀಡುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಈಗಾಗಲೇ ಕರೊನಾದಿಂದ ಜನರು ಭಯಭೀತರಾಗಿದ್ದಾರೆ. ಅಂಥದ್ದರಲ್ಲಿ ದೆಹಲಿಯಿಂದ ಹೋದವರಿಗೆ ಉತ್ತರಪ್ರದೇಶದಲ್ಲಿ ಥಳಿಸಿ, ಹಿಂಸೆ ನೀಡಲು, ಸಿಎಂ ಯೋಗಿ ಆದಿತ್ಯನಾಥ್ ಅವರು ಆದೇಶ ನೀಡಿದ್ದಾರೆ ಎಂಬಿತ್ಯಾದಿ ಸುಳ್ಳುಸುದ್ದಿಗಳನ್ನು ಶಾಸಕರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದರು. ಯುಪಿದಲ್ಲಿ ಯಾವ ಕಾರ್ಮಿಕರಿಗೂ ಹೊಡೆಯುತ್ತಿಲ್ಲ ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ.
ಶಾಸಕರ ಟ್ವೀಟ್ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸದಂತೆ ಇರಬಹುದು. ಆದರೆ ಜನರಲ್ಲಿ ಆತಂಕವನ್ನು ಸೃಷ್ಟಿಸುವಂತಿದೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್)