ಬೆಂಗಳೂರು: ಆಧಾರ್ ಹಾಗೂ ಪ್ಯಾನ್ ನಂಬರ್ ಲಿಂಕ್ ಮಾಡಲು ದಂಡ ವಿಧಿಸಿರುವ ಕ್ರಮವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ನಿರ್ಮಲಾ ಸೀತಾರಾಮನ್, ಆಧಾರ್-ಪ್ಯಾನ್ ಜೋಡಣೆಗೆ ಮೊದಲೇ ಸಮಯ ಕೊಡಲಾಗಿತ್ತು. ಅವಕಾಶ ಇದ್ದಾಗ ಆಧಾರ್-ಪ್ಯಾನ್ ಲಿಂಕ್ ಮಾಡಬೇಕಿತ್ತು. ಗಡುವು ಮುಗಿದ ಮೇಲೆ ದಂಡ ಹಾಕಲಾಗಿದೆ. ಈಗ ದಂಡ ಕಟ್ಟಿ ಲಿಂಕ್ ಮಾಡಬೇಕಿದೆ. ಈ ಗಡುವೂ ಮುಗಿದರೆ ದಂಡದ ಪ್ರಮಾಣ ಹೆಚ್ಚಾಗಲಿದೆ. ಇದು ಅನಿವಾರ್ಯ. ಕಾನೂನಾತ್ಮಕವಾಗಿಯೇ ದಂಡ ವಿಧಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ನ ಉಚಿತ ಯೋಜನೆಗಳ ಘೋಷಣೆ ಕುರಿತು ಮಾತನಾಡಿದ ಅವರು ಉಚಿತ ಯೋಜನೆಗಳು ಹಣಕಾಸು ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು. ಕಾಂಗ್ರೆಸ್ನ ಘೋಷಣೆಗಳಿಂದ 1 ಲಕ್ಷ ಕೋಟಿ ರೂ. ಹೆಚ್ಚುವರಿಯಾಗಿ ಬೇಕಾಗುತ್ತದೆ. ಆದರೆ, ಇದು ಸಾಧ್ಯವಿಲ್ಲ. ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳು ಜಾರಿಯಾಗಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ನಟ ಸುದೀಪ್ಗೆ ಬೆದರಿಕೆ ಪತ್ರ ಪ್ರಕರಣ: ಆ ಒಬ್ಬನಿಗಾಗಿ ಸಿಸಿಬಿ ಪೊಲೀಸರಿಂದ ತೀವ್ರ ಹುಡುಕಾಟ
ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿ ವಿರುದ್ಧ ಆಧಾತರಹಿತ ಆರೋಪ ಮಾಡುತ್ತಿದ್ದಾರೆ. ಗೌತಮ್ ಅದಾನಿಗೆ ಕೇಂದ್ರ ಸರ್ಕಾರ ಯಾವುದೇ ಸಹಾಯ ಮಾಡಿಲ್ಲ. ರಾಜಸ್ತಾನ ಹಾಗೂ ಛತ್ತೀಸ್ಗಢದಲ್ಲಿ ಅದಾನಿಗೆ ಯಾರು ಸಹಾಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಡೆಗೆ ಬಾಣ ತಿರುಗಿಸಿದರು.
ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ರಾಜ್ಯದಲ್ಲಿ ನಡೆದ ನಿರ್ಮಲಾ ಸೀತಾರಾಮನ್ ಅವರ ಮೊದಲ ಪತ್ರಿಕಾಗೋಷ್ಠಿ ಇದಾಗಿದೆ. ಪ್ರಧಾನಿ ಮೋದಿ ಅವರು 2015ರಿಂದ ಇಲ್ಲಿಯವರೆಗೂ 32 ಬಾರಿ ಕರ್ನಾಟಕ್ಕೆ ಭೇಟಿ ನೀಡಿದ್ದಾರೆ. ಜಿ-20 ಸಭೆ ಬೆಂಗಳೂರಿನಲ್ಲಿ ಆಗಿದೆ. ಅಮಿತ್ ಷಾ, ನಡ್ಡಾ ಸೇರಿದಂತೆ ಪ್ರಮುಖ ನಾಯಕರು ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಯುಪಿಎ ಸರ್ಕಾರ ರಾಜ್ಯದ ನೆರವಿಗೆ ಬರಲಿಲ್ಲ. ಹೈವೆಗಳು, ರೈಲ್ವೆ ಕಾಮಗಾರಿಗಳಿಗೆ ಡಬಲ್ ಎಂಜಿನ್ ಸರ್ಕಾರ ಸಾಕಷ್ಟು ಅನುದಾನ ನೀಡಿದೆ ಎಂದು ಹೇಳಿದರು. (ಏಜೆನ್ಸೀಸ್)
ಮಗಳಿಗಾಗಿ 77 ಕೆಜಿ ಕಳೆದುಕೊಂಡ ತಂದೆ; ಆಕೆಯ ದುಃಖ ಭರಿತ ಮುಖ ಜೀವನವನ್ನೇ ಬದಲಿಸಿತು!
6 ಹೆಂಡ್ತಿಯರ ಮುದ್ದಿನ ಗಂಡನಿಗೆ ಮೊದಲ ಮಗುನಾ ಯಾವ ಪತ್ನಿಯಿಂದ ಪಡೆಯಬೇಕೆನ್ನುವ ಚಿಂತೆ!