ಕೋಲಾರ: ಹೃದಯಾಘಾತದಿಂದ ಕೊನೆಯುಸಿರೆಳೆದು ದೇಹದಾನ ಮಾಡಿ ಸಾರ್ಥಕತೆ ಮೆರೆದಿದ್ದ ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ದೇಹಾಂಶಕ್ಕೆ ಜಿಲ್ಲಾಡಳಿತ, ಕುಟುಂಬಸ್ಥರು, ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಅಂತಿಮ ಗೌರವ ಸಮರ್ಪಿಸಿದರು.
ಮೇಘಾಲಯದ ಶಿಲ್ಲಾಂಗ್ನ ಮಿಲಿಟರಿ ಕ್ಯಾಂಪ್ನಲ್ಲಿ ಅಮರನಾಥ್ ದೇಹಕ್ಕೆ ಮಿಲಿಟರಿ ಗೌರವಗಳನ್ನು ಸಲ್ಲಿಸಿದ ನಂತರ ಅಲ್ಲಿಗೆ ತೆರಳಿದ್ದ ಅವರ ಕುಟುಂಬ ಸದಸ್ಯರಿಗೆ ಅಮರನಾಥ್ ದೇಹದ ಕೆಲವು ಭಾಗಗಳನ್ನು ಸಂಗ್ರಹಿಸಿ ವೈದ್ಯರು ನೀಡಿದ್ದರು.
ದೇಹಾಂಶಗಳನ್ನು ಕೋಲಾರಕ್ಕೆ ತಂದಿದ್ದ ಕುಟುಂಬಸ್ಥರು ಗಲ್ಪೇಟೆ ಮನೆಯ ಬಳಿ ಇಟ್ಟು ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ಅಕ್ರಂಪಾಷಾ, ತಹಸೀಲ್ದಾರ್ ಹರ್ಷವರ್ಧನ್ ಹಾಗೂ ಪೌರಾಯುಕ್ತ ಶಿವಾನಂದ ಇತರರು ಗೌರವ ಸಲ್ಲಿಸಿದರು.
ನಂತರ ಅಮರನಾಥ್ರ ಸಮವಸ್ತ್ರ, ದೇಹದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜ, ಭಾವಚಿತ್ರವನ್ನು ಅಲಂಕೃತ ರಥದಲ್ಲಿಟ್ಟು ನಗರದಲ್ಲಿ ಮೆರವಣಿಗೆ ಮಾಡಲಾಯಿತು.
ಮನೆಯಿಂದ ಬೈಕ್ ರ್ಯಾಲಿ, ನಿವೃತ್ತ ಯೋಧರು, ವಿವಿಧ ಸಂಘ&ಸಂಸ್ಥೆಗಳ ಯುವಕರು, ಎನ್ಸಿಸಿ ಬೆಟಾಲಿಯನ್, ಯುವ ಯೋಧರ ಪಡೆ ಮತ್ತಿತರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸೇರಿ ಅಮರನಾಥ್ ಅಮರ್ ರಹೇ ಘೋಷಣೆ ಮೊಳಗಿಸಿದರು. ಮೆಕ್ಕೆ ವೃತ್ತ, ಬಸ್ ನಿಲ್ದಾಣ, ಕ್ಲಾಕ್ ಟವರ್ ವೃತ್ತದ ಮೂಲಕ ಅಂಬೇಡ್ಕರ್ ಉದ್ಯಾನದಲ್ಲಿರುವ ಹುತಾತ್ಮ ಸ್ಮಾರಕದ ಬಳಿ ಕೆಲ ಕಾಲ ಇಡಲಾಗಿತ್ತು. ಆನಂತರ ಡೂಂಲೈಟ್ ವಿವೇಕಾನಂದ ವೃತ್ತದ ಮೂಲಕ ಗಾಂವನ, ಎಂ.ಜಿ.ರಸ್ತೆ, ಅಮ್ಮವಾರಿಪೇಟೆ ಮೂಲಕ ಅಮರನಾಥ್ರ ಸ್ವಗ್ರಾಮ ಸುಗಟೂರಿಗೆ ಕರೆ ತರಲಾಯಿತು. ಸುಗಟೂರು ಗ್ರಾಮಸ್ಥರು ಹಾಗೂ ಅಮರನಾಥ್ ಕುಟುಂಬ ಸದಸ್ಯರೆಲ್ಲರು ಗೌರವ ಸಲ್ಲಿಸಿದರು. ನಂತರ ತೋಟದಲ್ಲಿ ಗುರುತಿಸಿದ್ದ ಸ್ಥಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದೇ ವೇಳೆ ಪೊಲೀಸ್ ತುಕಡಿಯಿಂದ ಆಗಸಕ್ಕೆ ಗುಂಡು ಸಿಡಿಸಿ ಗೌರವ ಸಮರ್ಪಿಸಲಾಯಿತು.