ಬಾಳೆಹೊನ್ನೂರು: ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ, ಬಫರ್ ಝೋನ್ ಯೋಜನೆ ಹಿಂಪಡೆಯುವವರೆಗೂ ಮುಂಬರುವ ಗ್ರಾಪಂ ಚುನಾವಣೆ ಬಹಿಷ್ಕರಿಸಲು ಗುರುವಾರ ಸಂಗಮೇಶ್ವರ ಪೇಟೆ ಪ್ರೌಢಶಾಲಾ ಸಮುದಾಯ ಭವನದಲ್ಲಿ ನಡೆದ ಸರ್ವಪಕ್ಷ ಸಭೆ ನಿರ್ಣಯ ಕೈಗೊಂಡಿತು.
ಜಿಲ್ಲೆ ಹಾಗೂ ತಾಲೂಕಿನ ಅನೇಕ ಹೋಬಳಿಗಳ ಸರ್ವೆ ನಂ.ಗಳನ್ನು 12.5 ಕಿ.ಮೀ. ದೂರದವರೆಗೂ ವಿಸ್ತರಿಸಿ ರೈತರು, ಕೂಲಿ ಕಾರ್ವಿುಕರು ವಾಸಿಸುವ ಪ್ರದೇಶದ ಮೇಲೆ ಈ ಮಾರಕ ಯೋಜನೆಗಳನ್ನು ಹೇರಲಾಗುತ್ತಿದೆ. ಈ ಯೋಜನೆಗಳು ಸಂಬಂಧಪಟ್ಟ ಗ್ರಾಪಂ ಸಭಾ ನಿರ್ಣಯವಾಗಿರುವುದಿಲ್ಲ. ನ್ಯಾಯಾಲಯದ ಸ್ಪಷ್ಟ ಆದೇಶ ಅರಿಯದೆ ಅವೈಜ್ಞಾನಿಕವಾಗಿ ನಕಲಿ ದಾಖಲೆ ಸೃಷ್ಟಿಸಿ ರೂಪಿಸಿರುವ ಯೋಜನೆಗಳಾಗಿವೆ ಎಂದು ದೂರಿದರು.
ನಾಮಪತ್ರ ಸಲ್ಲಿಕೆಯ ದಿನಗಳಾದ ಡಿ.7 ರಿಂದ 11 ರವರೆಗೆ ಪಕ್ಷೇತರರು ಸೇರಿದಂತೆ ಯಾವ ಪಕ್ಷದ ಅಭ್ಯರ್ಥಿಗಳೂ ಹೋಬಳಿ ವ್ಯಾಪ್ತಿಯ ಗ್ರಾಪಂಗಳ ಚುನಾವಣಾಧಿಕಾರಿಗಳ ಕೇಂದ್ರಕ್ಕೆ ಬರುವಂತಿಲ್ಲ. ಈ ಕುರಿತು ಜನರಿಗೆ ಅರಿವು ಮೂಡಿಸಲು ಎಲ್ಲ ಪಕ್ಷದ ಬೂತ್ ಮಟ್ಟದ ಅಧ್ಯಕ್ಷರು, ರೈತಪರ ಸಂಘಟನೆಗಳು ಸಕ್ರಿಯವಾಗಿ ಕೆಲಸ ಮಾಡುತ್ತವೆ. ಆ ದಿನದಂದು ನಾಮಪತ್ರ ಸಲ್ಲಿಕೆಯ ಕೇಂದ್ರಕ್ಕೆ ಬೀಗ ಹಾಕುವ ಕುರಿತು ಚರ್ಚೆ ನಡೆಸಲಾಯಿತು.