ಬೆಂಗಳೂರು: ನಟ, ಕರ್ನಾಟಕ ರತ್ನ, ಪವರ್ಸ್ಟಾರ್ ಡಾ. ಪುನೀತ್ ರಾಜ್ಕುಮಾರ್ ಜನ್ಮದಿನದ ಅಂಗವಾಗಿ ಮಾರ್ಚ್ 15ರಂದು ಜಾಕಿ ಸಿನಿಮಾ ಮರುಬಿಡುಗಡೆಯಾಗುತ್ತಿದ್ದು, ನೆಚ್ಚಿನ ನಟನ ಸಿನಿಮಾವನ್ನು ಬರಮಾಡಿಕೊಳ್ಳಲು ಅಪ್ಪು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಈ ನಡುವೆ ಸಿನಿಮಾ ರೀ ರಿಲೀಸ್ ಆಗುತ್ತಿರುವ ನಡುವೆಯೇ ವಿವಾದ ಒಂದು ಭುಗಿಲೆದ್ದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪುನೀತ್ ರಾಜ್ಕುಮಾರ್ ಅಭಿನಯದ ಜಾಕಿ ಸಿನಿಮಾದಲ್ಲಿ ಫೈರ್ ಫೈಟ್ ಇರುವುದು ಎಲ್ಲರಿಗೂ ಗೊತ್ತಿದೆ. ಜಾಕಿ ಸಿನಿಮಾದ ಹೈಲೆಟ್ಗಳಲ್ಲಿ ಆ ಫೈಟ್ ಕೂಡ ಒಂದಾಗಿತ್ತು. ಈಗ ಅದೇ ಫೈಟ್ ಇಬ್ಬರು ಸಾಹಸ ನಿರ್ದೇಶಕರ ನಡುವಿನ ವಿವಾದಕ್ಕೆ ಕಾರಣವಾಗಿದೆ.
ಜಾಕಿ ಸಿನಿಮಾದ ಫೈರ್ ಫೈಟ್ ಕಂಪೋಸ್ ಮಾಡಿದ್ದು ನಾನು ಅಂತ ಸುಳ್ಳು ಹೇಳಿ ಸಾಹಸ ನಿರ್ದೇಶಕ ರವಿವರ್ಮ ಬಾಲಿವುಡ್ನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಫೈಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಚುನಾವಣೆಗೆ ಖರ್ಚು ಮಾಡಲು ನಮ್ಮ ಬಳಿ ಹಣವಿಲ್ಲ: ಮಲ್ಲಿಕಾರ್ಜುನ ಖರ್ಗೆ
ಫೈರ್ ಫೈಟ್ ಮಾಡಿದ್ದು ನಾನು ಆದರೆ ರವಿವರ್ಮ ಕ್ರೆಡಿಟ್ ತೆಗೆದುಕೊಂಡು, ಬಾಲಿವುಡ್ನಲ್ಲಿ ಅವಕಾಶವನ್ನು ಪಡೆದುಕೊಂಡರು. ಫೈಯರ್ ಫೈಟಿಂಗ್ ನಾನೇ ಮಾಡಿದ್ದು ಎಂದು ಪ್ರಭುದೇವ ಅವರಿಗೆ ಸುಳ್ಳು ಹೇಳಿ ಬಾಲಿವುಡ್ಗೆ ಹೋಗಿದ್ದಾರೆ. ಇವರ ಈ ಸುಳ್ಳು ಹೇಳಿಕೆಯನ್ನು ನಾನು ಖಾಸಗಿ ಸುದ್ದಿ ವಾಹಿನಿಯಲ್ಲಿ ಹೇಳಿದ್ದೆ. ಹೀಗಾಗಿ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಡಿಫರೆಂಟ್ ಡ್ಯಾನಿ ಆರೋಪಿಸಿದ್ದಾರೆ.
ಈ ವಿಚಾರಚಾಗಿ ರವಿವರ್ಮ ನನಗೆ ನಾಲ್ಕೈದು ಬಾರಿ ಕರೆ ಮಾಡಿದ್ದರು. ಆದರೆ ಕೌಟುಂಬಿಕ ಕಾರಣಕ್ಕೆ ನಾನು ಕರೆ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ ನನ್ನ ಸಹಾಯಕನಾದ ಕೆ.ಪಿ ಮಂಜುಗೆ ರವಿವರ್ಮ ಫೋನ್ ಮಾಡಿ, ನನ್ನ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲದೆ ಕೊಲೆ ಬೆದರಿಕೆ ಹಾಕಿ, ಇವನನ್ನು ಮಾಸ್ತಿಗುಡಿ ದುರಂತದ ಸಮಯದಲ್ಲೇ ಮುಗಿಸಬೇಕಿತ್ತು. ಆದರೆ ನಮ್ಮ ಅಕ್ಕ ತಡೆದಿದ್ದಕ್ಕೆ ಸುಮ್ಮನಾಗಿಬಿಟ್ಟೆ. ಈಗಲೂ ನನ್ನ ಬಗ್ಗೆ ಮೀಡಿಯಾ ಮುಂದೆ ಮಾತನಾಡುತ್ತಿದ್ದಾನೆ. ಈಗ ಅವನನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಎತ್ತಿಬಿಡಿಸುತ್ತೇನೆಂದು ಬೆದರಿಕೆ ಮಾತುಗಳನ್ನಾಡಿದ್ದಾರೆ ಎಂದು ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.