ಕೊಪ್ಪಳ: ಮನೆಯಲ್ಲಿ ಹೆಣ್ಣು ಹುಟ್ಟಿತೆಂದು ಬೇಸರಿಸಿಕೊಳ್ಳದೆ ಸಂತಸ ಪಡಬೇಕೆಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹೇಳಿದರು. ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಯಾವಾಗ ಮದುವೆ ಮಾಡಬೇಕೆಂದು ಹೆಚ್ಚಿನ ಜನ ಯೋಚಿಸುತ್ತಾರೆ. ಅದು ತಪ್ಪು. ಅದರ ಬದಲು ಹೆಣ್ಣು-ಗಂಡೆಂದು ಬೇಧ ಮಾಡದೆ ಉನ್ನತ ಶಿಕ್ಷಣ ಕೊಡಿಸಬೇಕು. ಅವಳನ್ನು ಸ್ವಾವಲಂಬಿ ಮಾಡಬೇಕು. ಮಹಿಳೆಯರು ತಮ್ಮ ಹಕ್ಕು, ಸ್ವಾತಂತ್ರೃಅರಿಯಬೇಕು. ಆರ್ಥಿಕ ಸ್ವಾವಲಂಬನೆ ಹೊಂದಬೇಕು ಎಂದರು.
ಜಿಪಂ ಸಿಇಒ ಫೌಜಿಯಾ ತರನ್ನುಮ್ರನ್ನು ಸನ್ಮಾನಿಸಲಾಯಿತು. ಅಳವಂಡಿ ಬಾಂಧವ್ಯ ಸಂಜೀವಿನಿ ಗ್ರಾಮ ಮಟ್ಟದ ಮಹಿಳಾ ಒಕ್ಕೂಟದ ಸದಸ್ಯರು, ವಿಜ್ಞಾನ ಪರೀಕ್ಷೆ, ವಿವಿಧ ಸ್ಪರ್ಧೆಗಳ ವಿಜೇತರು, ಎನ್.ಆರ್.ಎಲ್.ಎಂ, ಅಂಗನವಾಡಿ, ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಲಘು ವಾಹನ ತರಬೇತಿ ಪಡೆದ 34 ಮಹಿಳೆಯರಿಗೆ ಚಾಲನಾ ಪರವಾನಗಿ ವಿತರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರು, ಜಿಪಂ ಉಪ ಕಾರ್ಯದರ್ಶಿ ಶರಣ ಬಸವರಾಜ, ಪಿಡಿ ಟಿ.ಕೃಷ್ಣಮೂರ್ತಿ, ಪಾಯಲ್ ಸುರಳ್ಕರ್, ಕವಿತಾ ಎಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ, ಯುನಿಸೆಫ್ನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ಇತರರಿದ್ದರು.
ಭಾರತದಲ್ಲಿ ಮಹಿಳೆಯನ್ನು ದೇವತೆ ರೂಪದಲ್ಲಿ ಪೂಜಿಸುತ್ತಾರೆ. ಆದರೆ, ಮಹಿಳೆ ರಕ್ಷಣೆಗಾಗಿ ಅತಿ ಹೆಚ್ಚು ಕಾನೂನುಗಳಿರುವುದು ನಮ್ಮಲ್ಲೇ ಎನ್ನುವುದು ವಿಪರ್ಯಾಸ. ಅಲಿಖಿತ ನಿಯಮಗಳಿಂದ ಅವಳನ್ನು ಹಿಂಸಿಸುವುದು ತಪ್ಪು.
| ದೇವೇಂದ್ರ ಪಂಡಿತ್, ಹಿರಿಯ ಸಿವಿಲ್ ನ್ಯಾಯಾಧೀಶ, ಕೊಪ್ಪಳ