ಮುಂಡರಗಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯಿಂದ ಗೇಟ್ಗಳ ಮೂಲಕ ತಾಲೂಕಿನ ವಿವಿಧ ಹಳ್ಳಗಳಿಗೆ ನೀರು ಹರಿಸಲಾಗುತ್ತಿತ್ತು.
ಈಗ ಕಾಲುವೆ ಗೇಟ್ಗೆ ಕಾಂಕ್ರೀಟ್ ಹಾಕಿ ಬಂದ್ ಮಾಡಲಾಗಿದೆ. ಇದನ್ನು ನಂಬಿಕೊಂಡು ಹಳ್ಳದ ಭಾಗದ ಸಾವಿರಾರು ರೈತರು ತಮ್ಮ ಜಮೀನಿನಲ್ಲಿ ನೀರಾವರಿ ಮಾಡಿಕೊಳ್ಳುತ್ತಿದ್ದರು. ಆದ್ದರಿಂದ ತಕ್ಷಣ ಅದನ್ನು ತೆರವುಗೊಳಿಸಿ ಪುನಃ ಹಳ್ಳಕ್ಕೆ ನೀರು ಹರಿಸಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಒತ್ತಾಯಿಸಿದರು.
ತಾಲೂಕಿನ ಡಂಬಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಈಗ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಕಲಕೇರಿ, ಹಾರೋಗೇರಿ, ಹಿರೇವಡ್ಡಟ್ಟಿ, ಡಂಬಳ, ಜಂತ್ಲಿಶಿರೂರು ಭಾಗದ ಹಳ್ಳಗಳಿಗೆ ನೀರು ಬಿಡುವುದರಿಂದ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಿಂಗಟಾಲೂರು ಏತ ನೀರಾವರಿ ಯೋಜನೆಯು 30 ವರ್ಷ ಗತಿಸಿದರೂ ಈವರೆಗೂ ತಾಲೂಕಿನ ರೈತರಿಗೆ ಸರಿಯಾಗಿ ಸೌಲಭ್ಯ ದೊರೆಯದಾಗಿದೆ. ಈ ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಯೋಜನೆಯನ್ನು ಅಳವಡಿಸುವ ಕಾರ್ಯ ನಡೆದಿದ್ದು, ವೈಫಲ್ಯಗೊಂಡಿದೆ. ಹನಿ ನೀರಾವರಿ ಪದ್ಧತಿ ಯಾವ ಭಾಗದಲ್ಲೂ ಯಶಸ್ವಿಯಾಗಿಲ್ಲ. ಇದರಿಂದ ರೈತರಿಗೆ ಅನುಕೂಲವಿಲ್ಲ. ಆದ್ದರಿಂದ ಹನಿ ನೀರಾವರಿಯನ್ನು ಸಂಪೂರ್ಣವಾಗಿ ತೆಗೆದು ಹಾಕಿ ಕಾಲುವೆ ಮುಖಾಂತರ ನೀರು ಹರಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.