ಬಾಗಲಕೋಟೆ: ಪ್ರಿಯತಮೆಯನ್ನ ಪ್ರಿಯಕರನೇ ಕೊಂದು ಆಕೆಯ ದೇಹವನ್ನ 35 ತುಂಡುಗಳಾಗಿ ಕತ್ತರಿಸಿ ಪ್ರಿಡ್ಜ್ನಲ್ಲಿಟ್ಟು ಇತ್ಯ ಒಂದೊಂದು ತುಂಡನ್ನು ರಾಷ್ಟ್ರರಾಜಧಾನಿ ದೆಹಲಿಯ ವಿವಿಧೆಡೆ ಎಸೆದ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ಮುಂಬೈ ಯುವತಿ ಶ್ರದ್ಧಾಳ ಭೀಕರ ಕೊಲೆ ಪ್ರಕರಣ ಮಾಸುವ ಮುನ್ನವೇ ಕರ್ನಾಟಕದಲ್ಲಿ ಇಂತಹದ್ದೇ ಮತ್ತೊಂದು ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ.
ನನ್ನ ಗಂಡ ಒಂದು ವಾರದಿಂದ ಕಾಣಿಸ್ತಿಲ್ಲ. ನನಗೆ ನನ್ನ ಮಗನ ಮೇಲೆ ಅನುಮಾನ ಇದೆ. ದಯವಿಟ್ಟು ತನಿಖೆ ಮಾಡಿ ಹುಡುಕಿಕೊಡಿ ಸರ್… ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಮಗನನ್ನ ವಶಕ್ಕೆ ಪಡೆದು ತನಿಖೆ ಶುರು ಮಾಡುತ್ತಿದ್ದಂತೆ ಘೋರ ರಹಸ್ಯ ಬಯಲಾಗಿದೆ. ಜನ್ಮ ಕೊಟ್ಟ ತಂದೆಯನ್ನೇ ಕೊಂದು ಶವವನ್ನು ತುಂಡು ತುಂಡು ಮಾಡಿ ಕೊಳವೆಬಾವಿಗೆ ತುರುಕಿರುವುದಾಗಿ ಬಾಯ್ಬಿಟ್ಟಿದ್ದು, ಸ್ಥಳದಲ್ಲಿ ಮೃತದೇಹ ಪತ್ತೆ ಕಾರ್ಯಾಚರಣೆ ಮಂಗಳವಾರ ಬೆಳಗ್ಗೆಯಿಂದ ನಡೆಯುತ್ತಿದ್ದು, ಶವದ ತುಂಡುಗಳು ಪತ್ತೆಯಾಗುತ್ತಿವೆ…
ಮುಧೋಳ ನಗರದ ಪರಶುರಾಮ ಕುಳಲಿ(54) ಕೊಲೆಯಾದ ತಂದೆ. ಮಗ ವಿಠ್ಠಲ ಕುಳಲಿ(20) ಕೊಲೆ ಆರೋಪಿ. ಡಿ.6ರ ರಾತ್ರಿ 12 ಗಂಟೆಯಲ್ಲಿ ರಾಡ್ನಿಂದ ಹಲ್ಲೆ ಮಾಡಿ ತಂದೆಯನ್ನು ಕೊಂದ ಮಗ, ಬಳಿಕ ಯಾರಿಗೂ ಅನುಮಾನ ಬಾರದಿರಲೆಂದು ಮೃತದೇಹವನ್ನು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ಇರುವ ತನ್ನ ಹೊಲಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಮುಚ್ಚಿದರೆ ಗೊತ್ತಾಗಬಹುದೆಂದು, ಕೊಳವೆಬಾವಿಗೆ ಹಾಕಲು ಯತ್ನಿಸಿದ್ದಾನೆ. ದೇಹ ಒಳಗೆ ತೂರುತ್ತಿಲ್ಲ ಎಂದು ಶವವನ್ನು ಕೊಡಲಿಯಿಂದ ತುಂಡು ತಂಡು ಮಾಡಿ ಕೊಳವೆಬಾವಿಗೆ ಹಾಕಿದ್ದಾನೆ.
ಬಳಿಕ ಒಂದು ವಾರ ಏನೂ ಅರಿಯದಂತೆ ಊರಲ್ಲಿ ಓಡಾಡಿಕೊಂಡಿದ್ದ. ಅನುಮಾನಗೊಂಡ ತಾಯಿ, ಮುಧೋಳ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಪೊಲಿಸರು ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾ ಸತ್ಯ ಬಾಯ್ಬಿಟ್ಟಿದ್ದಾನೆ. ಕುಡಿದ ಮತ್ತಲ್ಲಿ ನನ್ನ ತಂದೆ ನಿತ್ಯ ನನಗೆ ಹೊಡೆಯುತ್ತಿದ್ದ. ಅವಾಚ್ಯವಾಗಿ ಬೈಯ್ಯುತ್ತಿದ್ದ. ಅದಕ್ಕೆ ಸಿಟ್ಟಿನಲ್ಲಿ ರಾಡ್ನಿಂದ ಹಲ್ಲೆ ಮಾಡಿದೆ. ಗಂಭೀರ ಗಾಯಗೊಂಡು ಮೃತಪಟ್ಟರು. ಪ್ರಕರಣ ಮುಚ್ಚಿಹಾಕಲು ಶವವನ್ನು ಜಮೀನಿಗೆ ತೆಗೆದುಕೊಂಡು ಹೋಗಿ ನಮ್ಮದೇ ಕೊಳವೆಬಾವಿಗೆ ಶವವನ್ನು ಸಣ್ಣ ಸಣ್ಣ ತುಂಡು ಮಾಡಿ ಹಾಕಿದೆ ಎಂದು ವಿವರಿಸಿದ್ದಾನೆ. ಜೆಸಿಬಿಯಿಂದ ಕೊಳವೆಬಾವಿ ಸುತ್ತ ಅಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ ಒಂದೆರಡು ತುಂಡುಗಳು ಪತ್ತೆಯಾಗಿವೆ. ಮಗನನ್ನು ಪೊಲೀಸರು ಬಂಧಿದ್ದಾರೆ. (ಪ್ರಾಥಮಿಕ ಮಾಹಿತಿ)