ಹಿರೇಕೆರೂರ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಕೂಡಲೆ ಹಿಂಪಡೆಯಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕೃಷಿ ಕಾರ್ವಿುಕ ರೈತ ಸಂಘಟನೆಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ ಮಾತನಾಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಧನಿಕರಿಗೆ, ಬಂಡವಾಳಶಾಹಿಗಳಿಗೆ ಅನುಕೂಲವಾಗಲಿದೆ. ಜೀವನಕ್ಕಾಗಿ ಜಮೀನು ನಂಬಿದ ರೈತರು ಬೀದಿಪಾಲಾಗುವ ಸಾಧ್ಯತೆಗಳಿವೆ. ಅತಿವೃಷ್ಟಿಗೆ ಮೆಕ್ಕೆಜೋಳ ಬೆಳೆ ಹಾಳಾಗುತ್ತಿದ್ದು, ವಿಮೆ ಜೊತೆಗೆ ಪ್ರತಿ ಎಕರೆಗೆ 55 ಸಾವಿರ ರೂ. ಪರಿಹಾರ ನೀಡಬೇಕು. ಮುಖ್ಯಮಂತ್ರಿಗಳು ಕರೊನಾ ಮಹಾಮಾರಿ, ಅತಿವೃಷ್ಟಿ, ಬೆಲೆ ಕುಸಿತ ಪರಿಸ್ಥಿತಿ ಮನಗಂಡು ಕೂಡಲೆ ರಾಷ್ಟ್ರೀಕೃತ ಬ್ಯಾಂಕ್ನಲ್ಲಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ರಿಯಾಜುದ್ದೀನ್ ಭಾಗವಾನ್ ಮನವಿ ಸ್ವೀಕರಿಸಿದರು. ಸಂಘಟನೆಯ ತಾಲೂಕು ಅಧ್ಯಕ್ಷ ಶಿವಣ್ಣ ಜ್ಯಾವನವರ, ಬಸವರಾಜಪ್ಪ ಜಾಡರ, ಹನುಮಂತಗೌಡ ಸೊರಟೂರ, ಈರಪ್ಪ ಮಳವಳ್ಳಿ, ಲೋಕಪ್ಪ ಮುಚುಡಿ, ಬಸವರಾಜಪ್ಪ ಮೇಗಳಮನಿ, ಶಿವಾನಂದ ಬಸರೀಹಳ್ಳಿ, ಚಂದ್ರಪ್ಪ ಮುಚುಡಿ ಹಾಗೂ ಮತ್ತಿತರರು ಇದ್ದರು.