ಮುಂಡರಗಿ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸ ಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ತಹಸೀಲ್ದಾರ್ ಆಶಪ್ಪ ಪೂಜಾರಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ ಮಾತನಾಡಿ, ‘ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಬರುವ ಇಳುವರಿಯನ್ನು ಕಡಿಮೆ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿವೆ. ಹೀಗಾಗಿ ಎಫ್.ಆರ್.ಪಿ. ದರ ಕಳೆದ ವರ್ಷಕ್ಕಿಂತ ತುಂಬಾ ಕಡಿಮೆಯಾಗಿದೆ. ಕಬ್ಬು ಖರೀದಿ ಮಂಡಳಿ ಸಭೆಯಲ್ಲಿ ರೈತರಿಗೆ ಎಸ್.ಎ.ಪಿ. ಬೆಲೆ ನಿಗದಿ ಮಾಡಲಾಗುತ್ತದೆ ಎಂದು ಒಪ್ಪಲಾಗಿತ್ತು. ಆದರೆ, ಈ ಕುರಿತು ಇದುವರೆಗೂ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದೆ ಕಾಲಹರಣ ಮಾಡುತ್ತಿದೆ. ಇದರಿಂದ ಕಬ್ಬಿನ ಬೆಲೆ ನಿಗದಿಯಲ್ಲಿ ಅನ್ಯಾಯವಾಗುತ್ತಿದೆ’ ಎಂದು ದೂರಿದರು.
ಅತಿವೃಷ್ಟಿಯಿಂದ ಹಾಳಾಗಿರುವ ಬೆಳೆಗಳಿಗೆ ಸೂಕ್ತ ಬೆಳೆಹಾನಿ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಿರುವಷ್ಟು ಹಣ ಮಂಜೂರು ಮಾಡುವುದರ ಮೂಲಕ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ವಿಠ್ಠಲ ಗಣಾಚಾರಿ ಮಾತನಾಡಿ, ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲು ತಿರ್ವನಿಸಿದ್ದು, ಖರೀದಿಯ ಮಾನದಂಡಗಳನ್ನು ಬದಲಿಸಬೇಕು. ಪ್ರತಿ ರೈತರಿಂದ ಕನಿಷ್ಠ 100 ಕ್ವಿಂಟಾಲ್ ಭತ್ತ ಖರೀದಿಸಬೇಕು. ಕನಿಷ್ಠ ಬೆಂಬಲ ಬೆಲೆಯ ಜೊತೆಗೆ 200 ರೂ. ಪ್ರೋತ್ಸಾಹ ಧನ ಹೆಚ್ಚುವರಿ ನೀಡುವ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಸಜ್ಜನರ, ಈರಣ್ಣ ಕವಲೂರ, ಶರಣಪ್ಪ ಚೆನ್ನಳ್ಳಿ, ಮರಿಸ್ವಾಮಿ ಹಂಪಸಾಗರ, ಈರಣ್ಣ ಸಜ್ಜನರ, ಆರ್.ಎಂ. ಕೊಳಲು, ನಿಂಗಪ್ಪ ಬಂಗಿ, ಹನುಮಂತಪ್ಪ ಶೀರನಹಳ್ಳಿ, ಮಾಬುಸಾಬ್ ಬಳ್ಳಾರಿ, ಜಗದೀಶ ಮೇಟಿ, ಯಮನಪ್ಪ ಹಳ್ಳಕೇರಿ, ಕೋಟೆಪ್ಪ ಚೌಡ್ಕಿ, ನಿಂಗಪ್ಪ ತೋಟಪ್ಪನವರ ಇತರರು ಇದ್ದರು.