ದಾವಣಗೆರೆ: ರೈತರ ಆದಾಯ ದ್ವಿಗುಣ ಕುರಿತಂತೆ ಜಿಲ್ಲೆಯ ಪ್ರಗತಿಪರ ರೈತರ ಕುರಿತ ಪಕ್ಕಾ ವರದಿ ತಯಾರಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಪಂ ಸಭಾಂಗಣದಲ್ಲಿ ಶನಿವಾರ, ಲೀಡ್ ಬ್ಯಾಂಕ್ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಆಶಯದಂತೆ ೨೦೨೨ ರೊಳಗೆ ರೈತರ ಆದಾಯ ದ್ವಿಗುಣವಾಗುವ ಬಗ್ಗೆ ಪ್ರಸ್ತಾಪಿಸಿದ್ದರು. ಅದರಂತೆ ದ್ವಿಗುಣ ಹಾಗೂ ತ್ರಿಗುಣ ಆದಾಯ ಸಂಪಾದಿಸಿದವರ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದರು.
ಮೂರು ವರ್ಷಾವಧಿಯಲ್ಲಿ ಆಯಾ ರೈತರ ಬೆಳೆ ಪದ್ಧತಿ, ಇರುವ ಜಮೀನಿನಲ್ಲಿಯೇ ಇಳುವರಿ ಮತ್ತು ವರ್ಷವಾರು ನಿಗದಿತ ಬೆಲೆ ಇತ್ಯಾದಿ ಮಾಹಿತಿ ತಯಾರಿಸಬೇಕೆಂದು ಸೂಚಿಸಿದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರ ನಡೆಸಿದ ಸಮೀಕ್ಷೆಯ ೧೧೦ ಪ್ರಗತಿಪರ ರೈತರ ಕುರಿತಾದ ಆದಾಯ ದ್ವಿಗುಣ ಸಂಬಂಧಿತ ಕೈಪಿಡಿಯನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಪ್ರದರ್ಶಿಸಿದರು.
ಈ ವರದಿ ನಾನು ಒಪ್ಪುವುದಿಲ್ಲ. ಸಮೀಕ್ಷೆಯಲ್ಲಿ ಅಡಕೆಯೊಂದನ್ನೇ ಆಧರಿಸಬಾರದು. ಬೆಳೆ ಪದ್ಧತಿ ಬಗ್ಗೆ ನಮೂದಿಸಬೇಕು. ಪ್ರತಿ ವರ್ಷಕ್ಕೆ ರೈತರು ಹೊಸ ಜಮೀನು ಖರೀದಿಸಿದರೆ ಆದಾಯ ದ್ವಿಗುಣ ಆಗಿಯೇ ಆಗುತ್ತದೆ. ಹಾಗಾಗಿ, ಇರುವ ಭೂಮಿಯಲ್ಲಿ ಮೂರು ವರ್ಷದ ಸರಾಸರಿ ಇಳುವರಿ ಪ್ರಗತಿ ವರದಿ ಕಲೆ ಹಾಕಬೇಕು ಎಂದು ಸಂಸದರು ನುಡಿದರು.
ನಿಯಮದಂತೆ ಎಲ್ಲ ಬ್ಯಾಂಕ್ಗಳು ಕನಿಷ್ಠ ಶೇ.೬೦ ರಷ್ಟು ಸಿಡಿ ಅನುಪಾತ ನಿರ್ವಹಣೆ ಮಾಡಬೇಕು. ಗರಿಷ್ಠ ೧೦೦ ತಲುಪಲು ಅಭ್ಯಂತರವಿಲ್ಲ. ಹಾಗಾಗಿ, ಈ ಗುರಿ ಸಾಧಿಸಲು ಎಲ್ಲ ಬ್ಯಾಂಕರ್ಗಳು ಶ್ರಮಿಸಬೇಕು. ಬ್ಯಾಂಕ್ಗೆ ಬರುವ ಗ್ರಾಹಕರೊಂದಿಗೆ ಸೌಜನ್ಯದೊಂದಿಗೆ ವ್ಯವಹರಿಸಬೇಕು ಎಂದು ಆರ್ಬಿಐನ ಎಜಿಎಂ ಮುರಳಿಮೋಹನ್ ಪಾಠಕ್ ಸೂಚನೆ ನೀಡಿದರು. ಸಭೆಯಲ್ಲಿ ನಬಾರ್ಡ್ ಅಧಿಕಾರಿ ರಶ್ಮಿ ರೇಖಾ, ಕೆನರಾ ಬ್ಯಾಂಕ್ ಅಧಿಕಾರಿ ರವಿಕಲಾ ಇದ್ದರು.