ಮೂಡಿಗೆರೆ: ಸರ್ಕಾರ ಮತ್ತು ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿ ಕೆಲಸ ಮಾಡಿದರೆ ಕೃಷಿಕರ ಬದುಕು ಹಸನಾಗುತ್ತದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ರೈತ ಭವನದಲ್ಲಿ ಬುಧವಾರ ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಟಿಎಪಿಸಿಎಂಎಸ್ನಿಂದ ಆಯೋಜಿಸಿದ್ದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರೊನಾ ಹಾಗೂ ಅತಿವೃಷ್ಟಿಯಿಂದ ರೈತರ ಬದುಕು, ಆರ್ಥಿಕ ವ್ಯವಸ್ಥೆ ನಲುಗಿದೆ. ಹಾಗಾ ಕೃಷಿಕರ ಏಳಿಗೆಗಾಗಿ ಸರ್ಕಾರದ ಜತೆಗೆ ಸಹಕಾರ ಸಂಘಗಳು ಶ್ರಮಿಸಬೇಕಾಗಿದೆ. ಅಲ್ಲದೆ ಇಲ್ಲಿನ ಕಾಫಿ ಬೆಳೆಗಾರು ವಿವಿಧ ಸಂಕಷ್ಟ ಎದುರಿಸುತ್ತಿದ್ದಾರೆ. ಕಾಫಿ ಬೆಳೆಗಾರರ ಸಮಸ್ಯೆ ನಿವಾರಿಸಲು ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ನಮ್ಮ ದೇಶದ ಕೃಷಿ ಕ್ಷೇತ್ರದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ದೊಡ್ಡದು. ಸಹಕಾರ ಸಪ್ತಾಹ ಆರಂಭವಾಗಿ 67 ವರ್ಷವಾಗಿದೆ. ಈ ಚಳವಳಿ ಎಲ್ಲ ಸಮುದಾಯದ ರೈತರಿಗೆ ತಲುಪಬೇಕು ಎಂದು ಅಭಿಪ್ರಾಯಪಟ್ಟರು.
ಡಿಸಿಸಿ ಬ್ಯಾಂಕ್ನಿಂದ ತಾಲೂಕಿನ 14 ಕೃಷಿ ಪತ್ತಿನ ಸಹಕಾರ ಸಂಘಕ್ಕೆ 23.24 ಕೋಟಿ ರೂ. ಹೆಚ್ಚುವರಿ ಸಾಲದ ಚೆಕ್ ವಿತರಿಸಲಾಯಿತು. ಸಮಾಜ ಸೇವೆ ಹಾಗೂ ಕರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಶಿವಗಿರಿ ಸದಸ್ಯರು ಹಾಗೂ ಎಂಜಿಎಂ ಆಸ್ಪತ್ರೆಯಲ್ಲಿ ಕರೊನಾ ಪರೀಕ್ಷೆ ನಡೆಸುತ್ತಿರುವ ದಿನೇಶ್ ಅವರನ್ನು ಸನ್ಮಾನಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ, ಪಪಂ ಅಧ್ಯಕ್ಷ ಪಿ.ಜಿ.ಅನುಕುಮಾರ್, ನಿವೃತ್ತ ಸಹಕಾರ ಸಂಘಗಳ ಹಾಸನ ಪ್ಲಾಂಟರ್ಸ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಒ.ಎಸ್.ಗೋಪಾಲ ಗೌಡ, ಕೋಮಾರ್ಕ್ ಅಧ್ಯಕ್ಷ ಅರೆಕುಡಿಗೆ ಶಿವಣ್ಣ, ಎಪಿಎಂಸಿ ಅಧ್ಯಕ್ಷ ಕೆ.ಬಿ.ಗೋಪಾಲ ಗೌಡ, ತಾಲೂಕಿನ ಪಿಎಸಿಎಸ್ಗಳ ಅಧ್ಯಕ್ಷರಾದ ಜಿ.ಕೆ.ಮಂಜಪಯ್ಯ, ಎನ್.ಜೆ.ಜಯರಾಂ, ಮಂಜಪಯ್ಯ, ಜಿ.ಕೆ.ದಿವಾಕರ್, ಜಿ.ಯು.ಚಂದ್ರೇಗೌಡ, ಬಿ.ಎಂ.ರಮೇಶ್, ಎಚ್.ಎಂ.ರವಿ, ಬಿ.ಎನ್.ಜಯಪಾಲ್, ಎಚ್.ಜಿ.ಉತ್ತಮ್ುಮಾರ್, ಕೆ.ಎಂ.ಜಯರಾಂ, ಟಿ.ಪಿ.ಜಯಲಕ್ಷ್ಮೀ, ಶಾಂತಲಾ, ಟಿ.ಕಮಲಾಕ್ಷಿ, ಬಿ.ಎಸ್.ಪೂರ್ಣೆಶ್ವರಿ ಇತರರಿದ್ದರು.