ರಾಯಚೂರು: ಕನ್ನಡದ ‘ಯುವರತ್ನ’ ಪುನೀತ್ ರಾಜ್ಕುಮಾರ್ ನಿಧನಕ್ಕೆ ಇಡೀ ಕರುನಾಡೇ ಕಂಬನಿ ಮಿಡಿಯುತ್ತಿದೆ. ಅವರ ಜೀವನ, ಸಾಧನೆ, ವ್ಯಕ್ತಿತ್ವ ಮತ್ತು ಕೊಡುಗೆಗಳನ್ನು ಎಲ್ಲರೂ ಸ್ಮರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಯಚೂರಿನಲ್ಲಿ ‘ಅಪ್ಪು’ ಅಭಿಮಾನಿಗಳು ಅವರು ಬದುಕಿದ 46 ವರ್ಷಗಳ ನೆನಪಲ್ಲಿ ರುದ್ರಭೂಮಿಯಲ್ಲಿ 46 ಗಿಡಗಳನ್ನು ನೆಟ್ಟು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪಿನ ವೀರಶೈವ ಸಮಾಜದ ರುದ್ರಭೂಮಿಯಲ್ಲಿ ವನಸಿರಿ ಫೌಂಡೇಶನ್ ಪರವಾಗಿ ಗಿಡಗಳನ್ನು ನೆಟ್ಟ ಅಭಿಮಾನಿಗಳು, ಪುನೀತ್ 6 ತಿಂಗಳ ಮಗುವಾಗಿದ್ದಾಗಿನಿಂದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದ್ದಾರೆ.
ಇದನ್ನೂ ಓದಿ: ಪುನೀತ್ ಪಾರ್ಥೀವ ಶರೀರ ಮೆರವಣಿಗೆ: ನಗರದಲ್ಲಿ ಸಂಚಾರ ಮಾರ್ಗದ ಬದಲಾವಣೆ ಹೀಗಿದೆ…
ಜೊತೆಗೇ, “ಪುನೀತ್ ನಿಧನದ ದುಃಖದಲ್ಲಿ ಕೆಲವು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಕೇಳಿಬಂದಿದೆ. ಈ ರೀತಿ ದುಡುಕಬಾರದು. ಅಪ್ಪು ಬಾಸ್ ಮಾಡಿದ ಸತ್ಕಾರ್ಯಗಳಲ್ಲಿ ನಾಲ್ಕನೇ ಭಾಗದಷ್ಟಾದರೂ ನಾವೂ ಸೇವೆ ಮಾಡಿ ಅವರ ಆದರ್ಶವನ್ನು ಬದುಕಬೇಕು” ಎಂದು ರಾಯಚೂರಿನ ಯುವಕರು ಕರೆ ನೀಡಿದ್ದಾರೆ.