ಈಸ್ಟ್ ಗೋದಾವರಿ : ಕರೊನಾ ಭಯದಿಂದಾಗಿ ತಮ್ಮನ್ನು ತಾವೇ ಪುಟ್ಟ ಟೆಂಟ್ ಹೌಸಿನಲ್ಲಿ ಕೂಡಿಹಾಕಿಕೊಂಡು ಅನಾರೋಗ್ಯಕರವಾಗಿ ಬದುಕುತ್ತಿದ್ದರು ಎನ್ನಲಾದ ಕುಟುಂಬವೊಂದನ್ನು ಆಂದ್ರ ಪ್ರದೇಶ ಪೊಲೀಸರು ರಕ್ಷಣೆ ಮಾಡಿದ್ದಾರೆ. ಈಸ್ಟ್ ಗೋದಾವರಿ ಜಿಲ್ಲೆಯ ಕದಲಿ ಗ್ರಾಮದ ನಿವಾಸಿಗಳಾದ 50 ವರ್ಷದ ರುತ್ತಮ್ಮ ಮತ್ತು ಆಕೆಯ ಮಕ್ಕಳಾದ ಕಾಂತಾಮಣಿ(32), ರಾಣಿ (30), ಕಳೆದ 15 ತಿಂಗಳಿಂದ ಹೊರಬಂದೇ ಇಲ್ಲ ಎನ್ನಲಾಗಿದೆ.
ಈ ಮೂವರು ಒಂದು ಸಣ್ಣ ಟೆಂಟ್ ಹೌಸಿನಲ್ಲಿ ವಾಸಿಸುತ್ತಿದ್ದರು. 15 ತಿಂಗಳ ಹಿಂದೆ ತಮ್ಮ ಪಕ್ಕದ ಮನೆಯವರು ಕರೊನಾದಿಂದ ಸಾವಪ್ಪಿದ ಹಿನ್ನೆಲೆಯಲ್ಲಿ ತಮ್ಮನ್ನು ತಾವೇ ಮನೆಯ ಒಳಗೆ ಕೂಡಿ ಹಾಕಿಕೊಂಡಿದ್ದರು. ಆಶಾ ಕಾರ್ಯಕರ್ತರು ಅಥವಾ ಇತರರು ಮನೆಗೆ ಹೋದಾಗ, ಪ್ರತಿಕ್ರಿಯೆ ಇಲ್ಲದೆ, ಯಾರೂ ಇಲ್ಲ ಎಂದು ಮರಳುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ನಾಲ್ಕು ದಿನಗಳ ಕಾಲ ಶಿರಾಡಿ ಘಾಟ್ ರಸ್ತೆ ಸಂಚಾರ ಬಂದ್
ಇತ್ತೀಚೆಗೆ, ಈ ಕುಟುಂಬಕ್ಕೆ ನಿವೇಶನ ಅಲಾಟ್ ಆದ ಹಿನ್ನೆಲೆಯಲ್ಲಿ ಅವರ ಹೆಬ್ಬೆಟ್ಟು ಮುದ್ರೆ ಪಡೆಯಲು ಗ್ರಾಮದ ಸ್ವಯಂಸೇವಕಿಯೊಬ್ಬರು ಹೋದರು. ಆಗ ತಾವು ಆಚೆ ಬಂದರೆ ಸತ್ತುಹೋಗುತ್ತೇವೆ ಎನ್ನುತ್ತಾ ಅವರು ಹೊರಬರಲು ನಿರಾಕರಿಸಿದರು. ಆಗ ವಿಷಯವನ್ನು ಗ್ರಾಮದ ಸರಪಂಚರಿಗೆ ತಿಳಿಸಲಾಗಿ, ಅವರು ರಾಜೋಲ್ ಸಬ್ಇನ್ಸ್ಪೆಕ್ಟರ್ ಕೃಷ್ಣಮಾಚಾರಿ ಮತ್ತು ತಂಡದೊಂದಿಗೆ ತೆರಳಿ ಅವರನ್ನು ಹೊರತಂದರು ಎನ್ನಲಾಗಿದೆ.
ಈ ಕುಟುಂಬ ಸಣ್ಣ ಟೆಂಟ್ ಮನೆಯಲ್ಲಿಯೇ ತಮ್ಮ ನಿತ್ಯಕರ್ಮಗಳನ್ನೂ ಮಾಡಿಕೊಂಡು ಅನಾರೋಗ್ಯಕರವಾಗಿ ಜೀವಿಸುತ್ತಿತ್ತು. ಇನ್ನೂ ಕೆಲವು ದಿನ ಇದೇ ರೀತಿ ಬದುಕಿದ್ದರೆ ಅವರ ಪ್ರಾಣ ಹೋಗುವ ಸ್ಥಿತಿ ಉಂಟಾಗಿತ್ತು. ಅವರನ್ನು ಹೊರತಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗ್ರಾಮದ ಸರಪಂಚ್ ಚೊಪ್ಪಲ ಗುರುನಾಥ್ ಹೇಳಿದ್ದಾರೆ. (ಏಜೆನ್ಸೀಸ್)
ಇಂದಿನಿಂದ ರೈತರಿಂದ ವಿನೂತನ ಪ್ರತಿಭಟನೆ – ಜಂತರ್ ಮಂತರ್ನಲ್ಲಿ ‘ಕಿಸಾನ್ ಸಂಸದ್’!