ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಎರಡು ಹುಸಿ ಬೆದರಿಕೆ ಸಂದೇಶಗಳು ಬಂದಿದ್ದು, ಕೆಲಕಾಲ ಆತಂಕ ಸೃಷ್ಟಿಸಿತ್ತು.
ಈ ಕುರಿತು ಕೆಐಎ ಠಾಣೆ ಇನ್ಸ್ಪೆಕ್ಟರ್ ಟಿ.ಮುತ್ತುರಾಜ್, ಉತ್ತರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜೂನ್ 20ರ ರಾತ್ರಿ 10 ಗಂಟೆಯಲ್ಲಿ ಇನ್ಸ್ಪೆಕ್ಟರ್ ಮುತ್ತುರಾಜ್ ಮೊಬೈಲ್ಗೆ ಹಿಂದಿ ಭಾಷೆಯಲ್ಲಿ ಸಂದೇಶ ಬಂದಿದೆ. ಇದಾದ ಕೆಲ ನಿಮಿಷಕ್ಕೆ ಮತ್ತೊಂದು ಕನ್ನಡದಲ್ಲಿ ಸಂದೇಶ ಬಂದಿದೆ. ಈ ಎರಡು ಸಂದೇಶಗಳಲ್ಲಿ “ನಾಳೆ ಸಂಜೆ ಮತ್ತು ರಾತ್ರಿ ವಿಮಾನಗಳು ಇಳಿಯುವ ಬಗ್ಗೆ ಜಾಗರೂಕರಾಗಿರಿ ನೀವು ನಮ್ಮ ಜತೆ ಒಪ್ಪಂದ ಮಾಡಿಕೊಳ್ಳದಿದ್ದರೆ ನಾವು ನಿಮಗೆ ಸಹಕರಿಸುವುದಿಲ್ಲ’ ಎಂದು ಉಲ್ಲೇಖವಾಗಿತ್ತು. ಜೂನ್ 21ರ ಬೆಳಗ್ಗೆ 7.20ರಲ್ಲಿ ಸಂದೇಶಗಳನ್ನು ನೋಡಿಕೊಂಡ ಮುತ್ತುರಾಜ್, ತಕ್ಷಣ ಕೆಐಎ ಟರ್ಮಿನಲ್ ವ್ಯವಸ್ಥಾಪಕ ಸಂಪ್ರೀತ್ಗೆ ಮಾಹಿತಿ ರವಾನಿಸಿದ್ದಾರೆ. ಎಚ್ಚೆತ್ತ ಸಂಪ್ರೀತ್, ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಎಲ್ಲ ಹಿರಿಯ ಅಧಿಕಾರಿಗಳಿಗೆ ಅರ್ಲಟ್ ಸಂದೇಶ ರವಾನಿಸಿ ನಿಗಾವಹಿಸಿದ್ದರು. ಇದಾದ ಮೇಲೆ ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಸಿಬ್ಬಂದಿ ವಿಮಾನ ನಿಲ್ದಾಣ ತಪಾಸಣೆ ನಡೆಸಿ ಕೊನೆಗೆ ಹುಸಿ ಬೆದರಿಕೆ ಸಂದೇಶ ಎಂಬುದು ಖಚಿತ ಪಡಿಸಿಕೊಂಡಿದ್ದಾರೆ. ಆನಂತರ ಕೆಐಎ ಪ್ರಾಧಿಕಾರದ (ಬಾಂಬ್ ಟ್ರೆಟ್ ಅನಾಲಿಸಸ್ ಕಮಿಟಿ) ಅಧಿಕಾರಿಗಳು ಠಾಣೆಗೆ ಬಂದು ಪೊಲೀಸರ ಜತೆ ಸಭೆ ನಡೆಸಿದರು. ವಾಟ್ಸ್ಆ್ಯಪ್ ಸಂದೇಶ ಕುರಿತು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ಅಲ್ಲದೆ, ಈ ಕುರಿತು ಸಿಇಎನ್ ಠಾಣೆಗೆ ದೂರು ನೀಡಿ ವಾಟ್ಸ್ಆ್ಯಪ್ ಸಂದೇಶದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದರು. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
‘ಕರೊನಾ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಬಹುದು’ ಸಚಿವೆ ಶಶಿಕಲಾ ಜೊಲ್ಲೆ ಅಭಿಪ್ರಾಯ