ನವದೆಹಲಿ: ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಹೃದಯಾಘಾತ, ಕ್ಯಾನ್ಸರ್ ಸೇರಿದಂತೆ ಸಾವಿರಾರು ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯನ್ನು ಸುಲಭವಾಗಿ ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆಯ ನಕಲಿ ವೆಬ್ಸೈಟ್ ಒಂದನ್ನು ತೆರೆಯಲಾಗಿದ್ದು, ಇಲ್ಲಿ ಉದ್ಯೋಗ ಕೊಡುವ ಆಮಿಷ ಒಡ್ಡುತ್ತಿರುವುದು ಬೆಳಕಿಗೆ ಬಂದಿದೆ.
ಆಯಷ್ಮಾನ್ ಯೋಜನೆ ಇರುವುದು ಬಡ ಕುಟುಂಬಗಳ ವೈದ್ಯಕೀಯ ಸೌಲಭ್ಯಕ್ಕೆ ಮಾತ್ರ. ಈ ಯೋಜನೆ ಅಡಿ ಬಡ ಕುಟುಂಬಕ್ಕೆ (ಬಿಪಿಎಲ್) ವಾರ್ಷಿಕ 5 ಲಕ್ಷ ರೂ. ಮೊತ್ತದ ವೈದ್ಯಕೀಯ ಚಿಕಿತ್ಸಾ ವೆಚ್ಚ ಉಚಿತವಾಗಿದೆ. ಬಡತನದ ರೇಖೆಗಿಂತ ಮೇಲೆ ಇರುವ ಎಪಿಎಲ್ ಕುಟುಂಬಕ್ಕೆ, ಚಿಕಿತ್ಸಾ ವೆಚ್ಚದ (ಪ್ಯಾಕೇಜ್ ದರ) ಶೇ.30ರಷ್ಟು ನೆರವು, ವಾರ್ಷಿಕ ಗರಿಷ್ಠ 1.5 ಲಕ್ಷ ರೂ. ತನಕ ಸಿಗಲಿದೆ.
ಆದರೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಇರುವ ಈ ಯೋಜನೆ ಅಡಿ ಉದ್ಯೋಗ ದೊರಕಿಸಿಕೊಡುವುದಾಗಿ ನಂಬಿಸುವ ಜಾಲವೊಂದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಉಮೇಶ್, ರಜತ್ ಸಿಂಗ್, ಗೌರವ್ ಮತ್ತು ಸೀಮಾ ರಾಣಿ ಶರ್ಮ ಎಂಬುವವರನ್ನು ದೆಹಲಿ ಪೊಲೀಸರು ಇದಾಗಲೇ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇದರ ಹಿಂದೆ ಇನ್ನೆಷ್ಟು ಮಂದಿ ಇದ್ದಾರೆಯೋ ಬೆಳಕಿಗೆ ಬರಬೇಕಿದೆ.
ಇದನ್ನೂ ಓದಿ: ಬಿಜೆಪಿಯೇತರ ರಾಜ್ಯಗಳಲ್ಲಿಯೂ ಮೋದಿಗೇ ಅಧಿಕ ಫ್ಯಾನ್ಸ್: ಸಮೀಕ್ಷೆಯಿಂದ ಬಯಲು
ಈ ಜಾಲ ವಾರ್ಡ್ ಬಾಯ್, ನರ್ಸ್, ಲ್ಯಾಬ್ ಅಸಿಸ್ಟೆಂಟ್ಸ್, ಫಾರ್ಮಾಸಿಸಿಸ್ಟ್, ಆಯುಷ್ ಮಿತ್ರ ಮುಂತಾದ 5 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡುವುದಾಗಿ ಆಮಿಷ ಒಡ್ಡಿ ಇದಾಗಲೇ ಆರು ರಾಜ್ಯಗಳಲ್ಲಿ 4200ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳಿಂದ ಹಣ ವಸೂಲು ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ವಾಟ್ಸ್ಆ್ಯಪ್ ಮತ್ತು ಎಸ್ಎಂಎಸ್ಗಳ ಮೂಲಕ ಉದ್ಯೋಗ ದೊರಕಿಸಿಕೊಡುವ ಆಮಿಷ ಒಡ್ಡುವ ಈ ಗುಂಪು, ಅಲ್ಲಿ ಲಿಂಕ್ ಕೊಟ್ಟು, ಅದರ ಮೇಲೆ ಕ್ಲಿಕ್ ಮಾಡುವಂತೆ ಹೇಳುತ್ತಾರೆ. ಉದ್ಯೋಗಾಕಾಂಕ್ಷಿಗಳು ಕ್ಲಿಕ್ ಮಾಡಿದ ತಕ್ಷಣ ಅವರ ವೈಯಕ್ತಿಕ ಮಾಹಿತಿ ಇತ್ಯಾದಿಗಳನ್ನು ಪಡೆದುಕೊಂಡು ಹಣ ವಸೂಲು ದಂಧೆ ನಡೆಸುತ್ತಿರುವ ಬಗ್ಗೆ ಪೊಲೀಸರು ಎಚ್ಚರಿಸಿದ್ದಾರೆ.
ಅಧಿಕೃತ ವೆಬ್ಸೈಟ್ https://pmjay.gov.in
ಇದನ್ನು ಹೊರತುಪಡಿಸಿ ಆಯುಷ್ಮಾನ್ ಯೋಜನೆಯ ಹೆಸರು ಹೇಳಿ ಯಾವುದೇ ವೆಬ್ಸೈಟ್ ಲಿಂಕ್ ಬಂದರೆ ಕ್ಲಿಕ್ ಮಾಡಬೇಡಿ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಆರೋಗ್ಯದಿಂದಿರುವ ಖ್ಯಾತ ನಟಿಗೆ ಕರೊನಾ: ಅತ್ತೆಯಿಂದ ಅಂಟಿಕೊಂಡ ಮಹಾಮಾರಿ