ಲಿಂಗಸುಗೂರು: ಭಾವನೆಗಳಿಗೆ ಅಕ್ಷರ ರೂಪ ನೀಡುವ ಅಭಿವ್ಯಕ್ತಿಯೇ ಸಾಹಿತ್ಯ ಎಂದು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ ಹೇಳಿದರು.
ಇದನ್ನೂ ಓದಿ: ಕಸಾಪ: ರಾಜ್ಯೋತ್ಸವದ ಅಂಗವಾಗಿ ವಿಶೇಷ ಉಪನ್ಯಾಸ ಮಾಲಿಕೆ
ಭಾನುವಾರ ಪಟ್ಟಣದ ಗುರುಭವನದಲ್ಲಿ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮನುಷ್ಯನ ಅಂತರಂಗದಲ್ಲಿ ಅಡಗಿರುವ ಭಾವನೆಗಳನ್ನು ಹೊರ ಹಾಕಿದಾಗ ಕಲೆ, ಸಾಹಿತ್ಯ, ಸಂಗೀತ ಹೊರ ಹೊಮ್ಮುತ್ತದೆ. ಇಂತಹ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಮನಸ್ಸಿಗೆ ಶಾಂತಿ, ಸಮಾಧಾನದ ಬದುಕಿನ ಜತೆಗೆ ಪ್ರತಿಭೆ ಹೊರ ಹೊಮ್ಮಲು ಸಾಧ್ಯ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಳಪ್ಪ ವಿಶ್ವಕರ್ಮ, ಶಿಲ್ಪ ಕಲಾವಿದ ನೂರ್ಮಹ್ಮದ್ ಸಂತ್ರಾಸ್, ಮಲೆನಾಡ ಗಾಂಧಿ ಎಚ್.ಜಿ.ಗೋವಿಂದೇಗೌಡ, ರಾಜ್ಯ ಮಟ್ಟದ ಅತ್ಯುತ್ತಮ ಶಾಲಾ ಪ್ರಶಸ್ತಿ ಪಡೆದ ಬೆಂಡೋಣಿ ಸರ್ಕಾರಿ ಶಾಲೆ ಶಾಲಾ ಮುಖ್ಯಗುರು ಅಶೋಕ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಕವಿಗಳು ಸ್ವರಚಿತ ಕವನ ವಾಚನ ಮಾಡಿದರು.
ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು, ಸಾಹಿತಿ ಆರೀಫ್ ರಾಜಾ, ಡಾ.ಶಶಿಕಾಂತ ಕಾಡ್ಲೂರು, ಮಂಜುನಾಥ ಕಾಮಿನ್, ಹುಸೇನಪ್ಪ ಮುಂಡರಗಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗುರುರಾಜ ಗೌಡೂರು, ರೆಹಮಾನ್ಸಾಬ ನದಾಫ್, ಸುಜೀತ್ ಆನಂದ ಸೇರಿದಂತೆ ಇತರರು ಇದ್ದರು.