ಹೊಸಪೇಟೆ: ಕಲಬುರಗಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಪರ ಆಯುಕ್ತ ಡಾ.ಎಸ್.ಆಕಾಶ್ ಶನಿವಾರ ಕೂಡ್ಲಿಗಿಯ ಪರೀಕ್ಷಾ ಕೇಂದ್ರಗಳಾದ ಸರ್ಕಾರಿ ಪದವಿ ಪೂರ್ವ ಕಾಲೇಜ್, ಜ್ಞಾನ ಭಾರತಿ ಶಾಲೆ, ಸಂತ ಮೈಕಲ್ ಶಾಲೆಗೆ ಭೇಟಿ ಪರಿಶೀಲಿಸಿದರು.
ನಂತರ ನಗರದ ಜಿಪಂ ಕಚೇರಿಗೆ ಆಗಮಿಸಿ ಸಿಇಒ ಸದಾಶಿವ ಬಿ.ಪ್ರಭುಯೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ, ಕೇಂದ್ರಗಳಲ್ಲಿನ ವ್ಯವಸ್ಥೆ ಮತ್ತು ವೆಬ್ ಕಾಸ್ಟಿಂಗ್ ಕಾರ್ಯದ ಬಗ್ಗೆ ಚರ್ಚಿಸಿದರು. ಡಿಡಿಪಿಐ ಯುವರಾಜ ನಾಯ್ಕ ಇದ್ದರು.
ಜಿಲ್ಲಾಧಿಕಾರಿ ಭೇಟಿ: ಹೊಸಪೇಟೆ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ವಿಜ್ಞಾನ ವಿಷಯದ ಪರೀಕ್ಷೆಗೆ ಒಟ್ಟು 20,419 ವಿದ್ಯಾರ್ಥಿಗಳು ಹಾಜರಾಗಿದ್ದರು. 337 ವಿದ್ಯಾರ್ಥಿಗಳು ಗೈರಾಗಿದ್ದರು. ಹೊಸಪೇಟೆ ತಾಲೂಕಿನಲ್ಲಿ 5898, ಹಗರಿಬೊಮ್ಮನಹಳ್ಳಿ 2784, ಹೂವಿನಹಡಗಲಿ 2943, ಕೂಡ್ಲಿಗಿ 4651 ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ 4143 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಡಿಡಿಪಿಐ ತಿಳಿಸಿದ್ದಾರೆ.