ಕೆಪಿಎಸ್ಸಿ ಸಿ ಗ್ರೂಪ್ ಹುದ್ದೆಗಳ ಪರೀಕ್ಷೆ ಸಂಬಂಧ ಅಧಿಸೂಚನೆ ಹೊರಡಿಸಿತ್ತು. ಈಗ, ಕನ್ನಡ ಭಾಷಾ ಪರೀಕ್ಷೆ ಬರೆದು ಪಾಸಾದವರೂ ಮತ್ತೊಮ್ಮೆ ಪರೀಕ್ಷೆ ಬರೆಯಬೇಕೋ ಬೇಡವೋ ಎಂಬ ಗೊಂದಲ ಮೂಡಿಸಿದೆ. ಯಾಕೆಂದರೆ ಮೊದಲು ಹಾಲ್ಟಿಕೆಟ್ ಪಡೆದಿದ್ದ ಅಭ್ಯರ್ಥಿಗಳಿಗೆ ಒಂದೇ ಪರೀಕ್ಷೆಯ ದಿನಾಂಕದ ಹಾಲ್ಟಿಕೆಟ್ ಬಂದಿತ್ತು. ಈಗ ಕನ್ನಡ ಪರೀಕ್ಷೆಯೂ ಸೇರಿ ಎರಡು ದಿನಾಂಕಗಳಂದು ಪರೀಕ್ಷೆ ನಡೆಯಲಿರುವ ಹಾಲ್ಟಿಕೆಟ್ ಬಂದಿದೆ. ಇದು ಬಹಳಷ್ಟು ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ಈ ಕುರಿತು ಅನೇಕರು ‘ವಿಜಯವಾಣಿ ಸಹಾಯವಾಣಿ’ ಬಳಿ ಅಳಲು ತೋಡಿಕೊಂಡಿದ್ದು, ವಿಸõತ ವರದಿ ಇಲ್ಲಿದೆ.
| ಮರಿದೇವ ಹೂಗಾರ ಹುಬ್ಬಳ್ಳಿ
ಕನ್ನಡ ರಾಜ್ಯೋತ್ಸವ ಆಚರಿಸಿದ ಮಾರನೇ ದಿನವೇ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ), ಪರೀಕ್ಷೆ ಆಕಾಂಕ್ಷಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವೆಂಬ ‘ಭೂತ’ವನ್ನಿಟ್ಟು ಹೆದರಿಸಿದೆಯೇ ಎಂಬ ಅನುಮಾನ ಮೂಡಿದೆ. ಅ.26ರಂದು ಪ್ರಕಟಿಸಿದ್ದ ಪರೀಕ್ಷಾ ಪ್ರವೇಶ ಪತ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಮಾತ್ರ ಪ್ರಕಟಿಸಿತ್ತು. ಅ.31ರಂದು ಪ್ರಕಟಿಸಿರುವ ಪ್ರವೇಶಪತ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕವನ್ನು ನಮೂದಿಸಿದೆ. ಇದು ಈಗಾಗಲೇ ಕನ್ನಡ ಭಾಷಾ ಪರೀಕ್ಷೆ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಗೊಂದಲ ಮೂಡಿಸಿರುವುದಲ್ಲದೇ ಅನಗತ್ಯ ವೆಚ್ಚವನ್ನೂ ಮಾಡುವ ಪ್ರಸಂಗ ತಂದಿರಿಸಿದೆ.
ಗ್ರೂಪ್ ಸಿ ಹುದ್ದೆಗಳಾದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು (242), ಕಿರಿಯ ಲೆಕ್ಕ ಸಹಾಯಕರು (67), ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರು (47) ಮತ್ತು ಸಹಕಾರ ಸಂಘಗಳ ನಿರೀಕ್ಷಕರ (53) ಹುದ್ದೆಗಳಿಗೆ ಕೆಪಿಎಸ್ಸಿ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷಾ ದಿನವನ್ನು ನ.5 ಎಂದು ಪ್ರಕಟಿಸಿದೆ. ಕನ್ನಡ ಭಾಷಾ ಪರೀಕ್ಷೆಯನ್ನು ನ.4ರಂದು ನಿಗದಿಪಡಿಸಿದೆ.
ಒಂದು ಬಾರಿ ಕನ್ನಡ ಭಾಷಾ ಪರೀಕ್ಷೆ ಬರೆದು ಪಾಸಾದವರು ಮತ್ತೊಮ್ಮೆ ಈ ಪರೀಕ್ಷೆ ಎದುರಿಸುವ ಅಗತ್ಯವಿಲ್ಲ. ಆದರೆ ಅರ್ಜಿ ಸಲ್ಲಿಸುವ ಮುನ್ನ ಕೆಲವರು ಕೆಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಕನ್ನಡ ಭಾಷಾ ಪರೀಕ್ಷೆ ಬರೆದಿದ್ದಾರೆ. ಅದರ ಫಲಿತಾಂಶ ಪ್ರಕಟವಾಗಿರಲಿಲ್ಲ. ಅರ್ಜಿ ಸಲ್ಲಿಸುವ ಮುನ್ನ ಪರೀಕ್ಷೆ ಪಾಸಾಗಿದ್ದೇವೆ ಅಥವಾ ಪಾಸಾಗಿಲ್ಲ ಎಂದು ದಾಖಲಿಸಬೇಕಿತ್ತು. ಬಹಳಷ್ಟು ಜನರು ಪಾಸಾಗಿರುವ ಬಗ್ಗೆ ದಾಖಲಿಸಿದ್ದಾರೆ. ಆದರೆ, ಈಗ ಪಾಸಾದ ಅಭ್ಯರ್ಥಿಗಳ ಪ್ರವೇಶಪತ್ರದಲ್ಲೂ ಕನ್ನಡ ಭಾಷಾ ಪರೀಕ್ಷೆ ದಿನಾಂಕ ನಮೂದಾಗಿರುವುದು ಗೊಂದಲ ಮೂಡಿಸಿದೆ.
ಮೊದಲು ಡೌನ್ಲೋಡ್ ಮಾಡಿಕೊಂಡ ಹಾಲ್ಟಿಕೆಟ್ನಲ್ಲಿ ನ.5ರಂದು ಸ್ಪರ್ಧಾತ್ಮಕ ಪರೀಕ್ಷೆ ಎಂದು ಇದ್ದುದರಿಂದ ಅಭ್ಯರ್ಥಿಗಳು ಆ ದಿನಕ್ಕೆ ಮಾತ್ರ ಬಸ್ ರಿಸರ್ವೆಷನ್ ಮಾಡಿಸಿದ್ದರು. 5 ದಿನಗಳ ನಂತರ ಕೆಪಿಎಸ್ಸಿ ಜಾಲತಾಣದಲ್ಲಿಯ ಪ್ರಕಟಣೆ ನೋಡಿ ಡೌನ್ಲೋಡ್ ಮಾಡಿಕೊಂಡ ಹಾಲ್ಟಿಕೆಟ್ನಲ್ಲಿ ನ.4ರ ಪರೀಕ್ಷೆಯ ದಿನಾಂಕವೂ ಪ್ರಕಟವಾಗಿರುವುದರಿಂದ ಗೊಂದಲ ಉಂಟಾಗಿದ್ದು, ಅನೇಕರು ಮತ್ತೆ ಬಸ್ ಸೀಟ್ ಕಾಯ್ದಿರಿಸಲು ಓಡಾಡುವಂತಾಗಿದೆ.
ಕನ್ನಡ ಭಾಷಾ ಪರೀಕ್ಷೆ ಬರೆದು ಉತ್ತೀರ್ಣ ನಾಗಿದ್ದೇನೆ. ಮೊದಲು ಸಿಕ್ಕ ಹಾಲ್ಟಿಕೆಟ್ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕವಿತ್ತು. ಈಗ ಪ್ರಕಟಿಸಿರುವ ಹಾಲ್ಟಿಕೆಟ್ನಲ್ಲಿ ನ.4 ಮತ್ತು 5ರಂದು ಪರೀಕ್ಷೆಗಳಿವೆ. ಈ ಕುರಿತು ಕೆಪಿಎಸ್ಸಿ ಸಹಾಯವಾಣಿಗೆ ಕರೆ ಮಾಡಿದರೆ ಕನ್ನಡ ಭಾಷಾ ಪರೀಕ್ಷೆ ಬರೆಯಲೇಬೇಕು ಎನ್ನುತ್ತಿದ್ದಾರೆ.
| ಶಂಕರ ಪಲ್ಲಕ್ಕಿ, ನೊಂದ ಅಭ್ಯರ್ಥಿ
ಮತ್ತೆ ಪರೀಕ್ಷೆ ಬರೆಯುವ ದುಸ್ಥಿತಿ: ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ)(ಸಾಮಾನ್ಯ) ನಿಯಮ ಗಳು 2021ರಡಿ, ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗವು 2022 ನವೆಂಬರ್ 29ರ ನಂತರ ನಡೆಸಿದ ಕನ್ನಡ ಭಾಷಾ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿದ್ದಲ್ಲಿ ಆ ಫಲಿತಾಂಶವನ್ನು ಈ ಅಧಿಸೂಚನೆಯ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಗೆ ಪರಿಗಣಿಸಲಾಗುವುದು ಎಂದು ತಿಳಿಸ ಲಾಗಿದೆ. ಆದರೂ ಉತ್ತೀರ್ಣರಾದ ಅಭ್ಯರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯುವ ದುಸ್ಥಿತಿ ಬಂದಿದೆ.
ಬೆಟ್ಟಿಂಗ್ ಆ್ಯಪ್ನಿಂದಲೂ ಚುನಾವಣೆಗೆ ಹಣ!; ದೊಡ್ಡ ಮೊತ್ತವನ್ನೇ ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ
ಪಕ್ಷದ ರಾಜ್ಯಾಧ್ಯಕ್ಷರೇ ಟ್ರಕ್ ಕ್ಲೀನರ್ ಥರ ನಟಿಸಿ ಭ್ರಷ್ಟಾಚಾರ ಬಯಲಿಗೆಳೆದ್ರು!