ಕುಷ್ಟಗಿ: ವಿಜ್ಞಾನ ಹಾಗೂ ತಂತ್ರಜ್ಞಾನದ ಆವಿಷ್ಕಾರಗಳು ಪ್ರಕೃತಿ ಹಾಗೂ ಮನುಕುಲದ ಮೇಲೆ ದುಷ್ಪರಿಣಾಮ ಬೀರದಂತಿರಲಿ ಎಂದು ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ 2022-23ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ, ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಜ್ಞಾನ ಹಾಗೂ ತಂತ್ರಜ್ಞಾನದ ಆವಿಷ್ಕಾರಗಳಲ್ಲಿ ಪ್ಲಾಸ್ಟಿಕ್ ಕೂಡ ಒಂದಾಗಿದ್ದು, ಇದಿಲ್ಲದೆ ಜೀವನವೇ ಇಲ್ಲ ಎನ್ನುವಂತಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಜನ ಮಾರಣಾಂತಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ನಗರಗಳು ಬೆಳವಣಿಗೆಯಾಗುತ್ತ ಕೆರೆ ಕಟ್ಟೆಗಳು ಕಣ್ಮರೆಯಾಗಿ ಪ್ರಕೃತಿ ವಿಕೋಪಕ್ಕೆ ತುತ್ತಾಗುವ ಸ್ಥಿತಿ ಎದುರಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ವಿರೋಧಿ ಕಾರ್ಯದಲ್ಲಿ ತೊಡಗಿಕೊಳ್ಳುವುದು ಸಲ್ಲ ಎಂದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನೀಲನಗೌಡ ಹೊಸಗೌಡ್ರ ಮಾತನಾಡಿ, ಮಕ್ಕಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೊಂದಲು ಶಿಕ್ಷಕರ ಪಾತ್ರ ಹಿರಿದಾಗಿರುತ್ತದೆ. ವಿಚಾರಗೋಷ್ಠಿ, ನಾಟಕ, ವಸ್ತು ಪ್ರದರ್ಶನಗಳ ಆಯೋಜನೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸುತ್ತವೆ ಎಂದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಲೋಕೇಶ ಗೋಟೂರು, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಎಂ. ಗೊಣ್ಣಾಗರ ಮಾತನಾಡಿದರು. ಅಕ್ಷರ ದಾಸೋಹ ಅಧಿಕಾರಿ ಶರಣಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಶಾಕಿರ್ ಬಾಬಾ, ನಿರ್ದೇಶಕರಾದ ಭೀಮಪ್ಪ ಹೂಗಾರ, ರಾಜಶೇಖರ್, ಪ್ರೌಢಶಾಲಾ ಪತ್ತಿನ ನೌಕರರ ಸಂಘದ ಅಧ್ಯಕ್ಷ ತಿಮ್ಮಣ್ಣ ಕೋಟಮುಚಗಿ ಇತರರಿದ್ದರು.