ಬೀರೂರು: ಬೀರೂರು ಭಾಗದ ಅಡಕೆ ತೋಟಗಳಲ್ಲಿ ಬೆಳೆಯುತ್ತಿರುವ ವೀಳ್ಯದೆಲೆ ಬಳ್ಳಿಗಳು ಬಿಸಿಲಿನ ಪ್ರಖರತೆಗೆ ದಿನೇದಿನೆ ಬಾಡುತ್ತಿದ್ದು, ರೈತರು ಆಕಾಶದತ್ತ ಮುಖ ಮಾಡಿ ವರುಣನ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.
ತಂಪು ವಾತಾವರಣವೇ ಬೇಕಾಗಿರುವ ವೀಳ್ಯದೆಲೆ ಬೆಳೆ ಬಿಸಿಲಿನ ತಾಪ ಹೆಚ್ಚಾಗಿ ಸೊರಗುತ್ತಿದೆ. ಇದನ್ನು ತಪ್ಪಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದು, ಕೆರೆಕಟ್ಟೆಗಳಲ್ಲೂ ನೀರು ಬರಿದಾಗುತ್ತಿದೆ. ಜತೆಗೆ ಅಂತರ್ಜಲವೂ ಬರಿದಾಗುತ್ತಿದ್ದು, ಇರುವ ಕೊಳವೆಬಾವಿಗಳಲ್ಲೂ ನೀರು ಬಾರದೆ ಒಣಗುತ್ತಿದೆ. ಇಂತಹ ಸಂದರ್ಭದಲ್ಲಿ ವೀಳ್ಯದೆಲೆ ಬೆಳೆದ ರೈತರು ಅಂಬನ್ನು ಉಳಿಸಿಕೊಳ್ಳಲು ಇರುವ ಅಲ್ಪಸ್ವಲ್ಪ ನೀರನ್ನು ಹಾಯಿಸುತ್ತ ಹಗಲು-ರಾತ್ರಿ ಶ್ರಮವಹಿಸುತ್ತಿದ್ದಾರೆ.
ಒಂದು ಎಕರೆ ತೋಟದಲ್ಲಿ ಎಲೆ ಅಂಬು ಬೆಳೆದರೆ ಸರಾಸರಿ 15 ಪೆಂಡಿಗಳಷ್ಟು ವೀಳ್ಯದೆಲೆ ಇಳುವರಿ ಬರುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ 5 ಪೆಂಡಿಗಳು ಬರುವುದು ಅನುಮಾನವಾಗಿದೆ. ಮಾರುಕಟ್ಟೆಯಲ್ಲಿ ಒಂದು ಕಟ್ ಎಲೆ ಗರಿಷ್ಠ 50-60 ರೂ.ಗೆ ಮಾರಾಟವಾಗುತ್ತಿದೆ. ಆದರೆ ತೋಟದಲ್ಲಿ ವೀಳ್ಯದೆಲೆ ಬಾಡುತ್ತಿದ್ದು, ಬೇಡಿಕೆ ಹೆಚ್ಚಾಗುತ್ತಿದೆ. ಒಂದು ಪೆಂಡಿ ವೀಳ್ಯದೆಲೆಗೆ 4,000 ರೂ. ವರೆಗೂ ಮಾರಾಟ ಆಗುತ್ತಿದೆ. ಆದರೆ ಇಳುವರಿ ಕುಸಿದಿದ್ದು, ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದವರಿಗೆ ಸಂಕಷ್ಟ ಎದುರಾಗಿದೆ.
ಧಾರ್ಮಿಕ ಕಾರ್ಯಗಳು ಮಾತ್ರವಲ್ಲದೆ ಆರತಕ್ಷತೆ, ಮದುವೆ, ಗೃಹಪ್ರವೇಶ, ನಾಮಕರಣ, ಹಬ್ಬ-ಹರಿದಿನ ಹೀಗೆ ಎಲ್ಲ ಶುಭ ಸಮಾರಂಭಗಳಲ್ಲೂ ವೀಳ್ಯದೆಲೆ ಅಗ್ರಸ್ಥಾನ ಪಡೆದಿದೆ. ಅನೇಕ ಕಡೆ ಅಶುಭ ಕಾರ್ಯಗಳಲ್ಲೂ ವೀಳ್ಯದೆಲೆ ಅಗ್ರಸ್ಥಾನ ಪಡೆದಿದೆ. ಯಾವುದೇ ಋತುಮಾನ, ಕಾಲವಿರಲಿ ವೀಳ್ಯದೆಲೆಗೆ ಬೇಡಿಕೆ ಇದ್ದೇ ಇದೆ. ಆದರೆ ಬೇಡಿಕೆ ತಕ್ಕಂತೆ ಪೂರೈಕೆ ಇಲ್ಲದಿದ್ದರೂ ವೀಳ್ಯದೆಲೆಗೆ ಉತ್ತಮ ಬೆಳೆ ಸಿಗದಿರುವುದು ವಿಪರ್ಯಾಸ.