ಕಡೂರು: ಆದಿಗುರು ಶಂಕರಾಚಾರ್ಯರು ಕಾಲ್ನಡಿಗೆಯಲ್ಲಿ ಭಾರತ ಪರಿಕ್ರಮಿಸಿ ಸನಾತನ ಧರ್ಮದ ಜತೆಗೆ ಅದ್ವೈತ ಸಿದ್ಧಾಂತ ಪ್ರಸಾರ ಮಾಡಿದರು. ಧರ್ಮ ಸಂರಕ್ಷಣೆಗಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ದಕ್ಷಿಣಾಮ್ನಯಾ ಪೀಠ ನಮ್ಮ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಚೋಮನಹಳ್ಳಿ ಶ್ರೀನಿವಾಸ್ ಹೇಳಿದರು.
ಶಂಕರ ಜಯಂತಿಯ ನಿಮಿತ್ತ ಭಾನುವಾರ ಪಟ್ಟಣದ ಕೋಟೆಯಲ್ಲಿರುವ ಶಂಕರ ಮಠದಲ್ಲಿ ಏರ್ಪಡಿಸಿದ್ದ ವಿಶೇಷ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಡೂರು ತಾಲೂಕಿನ ಯಲ್ಲಂಬಳಸೆಯಲ್ಲಿ ಜನಿಸಿದ ಶ್ರೀ ಸಚ್ಚಿದಾನಂದೇಂದ್ರ ಸ್ವಾಮೀಜಿ ಹೊಳೇನರಸೀಪುರದಲ್ಲಿ ಆಧ್ಯಾತ್ಮ ಪ್ರಕಾಶನದ ಮೂಲಕ ಶಂಕರರ ತತ್ವಗಳನ್ನು ವಿಶ್ವವ್ಯಾಪಿಯಾಗಿಸಿದರು ಎಂದು ಸ್ಮರಿಸಿದರು.
ಶಂಕರಾಚಾರ್ಯರ ಪ್ರತಿಮೆಗೆ ಪಂಚಾಮೃತ ಅಭಿಷೇಕ, ಸಂಕಲ್ಪ ಸೇವೆ ನೆರವೇರಿಸಲಾಯಿತು. ಆಚಾರ್ಯರ ಮೂರ್ತಿಗೆ ವಿಶೇಷ ಅಲಂಕಾರ ಸಮರ್ಪಿಸಲಾಯಿತು. ಪ್ರಧಾನ ಅರ್ಚಕ ಜಗದೀಶ್ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿದವು.
ತಾಲೂಕು ಕಚೇರಿಯಲ್ಲೂ ಆಚರಣೆ: ತಾಲೂಕು ಕಚೇರಿಯಲ್ಲಿಯೂ ತತ್ವಜ್ಞಾನಿಗಳ ಜಯಂತಿ ದಿನಾಚರಣೆ ಆಚರಿಸಲಾಯಿತು. ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್, ಎಚ್.ಎನ್.ಶಿವಶಂಕರ್, ಸಾಮಿಲ್ ಸುಬ್ಬಣ್ಣ, ಫಣಿರಾಜ್, ಮಂಜುನಾಥ್, ಕೋಟೆ ಭರತ್, ರಾಮು ಇತರರಿದ್ದರು.