ಶಿವಮೊಗ್ಗ: ಪಾಕ ಶಾಲೆಯೇ ಮೊದಲ ಪಾಠಶಾಲೆ ಆಗಬೇಕು. ಹೆಚ್ಚು ತ್ಯಾಜ್ಯ ಉತ್ಪತ್ತಿ ಆಗುವ ಮನೆಯಿಂದಲೇ ಸ್ವಚ್ಛತೆ ಬಗ್ಗೆ ಪ್ರಜ್ಞೆ ಮೂಡಬೇಕು. ಆ ಮೂಲಕ ಪರಿಸರ ಪ್ರಜ್ಞೆಯೇ ನಿಜವಾದ ಸಮಾಜಸೇವೆ ಎಂದು ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆಕ್ಷನ್ ಹಾಲ್ನಲ್ಲಿ ಶನಿವಾರ ಕೈಗಾರಿಕೋದ್ಯಮಿ, ಎಂಎಲ್ಸಿ ಎಸ್.ರುದ್ರೇಗೌಡ ಅವರ ಅಮೃತಮಯಿ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಶ್ರಮದಿಂದ ಸಾರ್ಥಕತೆಯಡೆಗೆ ವಿಚಾರಗೋಷ್ಠಿಯಲ್ಲಿ ಪರಿಸರ ಪ್ರಜ್ಞೆಯೇ ಸಮಾಜಸೇವೆ ಕುರಿತು ಮಾತನಾಡಿದ ಅವರು, ಪರಿಸರ ಪ್ರಜ್ಞೆ ಎಂಬುದು ನಮ್ಮ ಮನೆಗಳ ಅಡುಗೆ ಮನೆಯಿಂದಲೇ ಆರಂಭವಾಗಬೇಕು. ತ್ಯಾಜ್ಯದ ಬಗ್ಗೆ ಜಾಗೃತವಾಗಿದ್ದರೆ ಸಮಾಜ ಸೇವೆ ಮಾಡಿದಂತೆ ಆಗಲಿದೆ ಎಂದರು.
ಬಳ್ಳಾರಿಯಲ್ಲಿ ಮಾತ್ರ ಕೊಳಚೆ ನೀರನ್ನು ಶುದ್ಧಿಕರಣ ಮಾಡಿ ಬಳಕೆ ಮಾಡಲಾಗುತ್ತಿದೆ. ಉಳಿದಂತೆ ದೇಶದ ಬಹುತೇಕ ಎಲ್ಲ ಕಡೆಗಳಲ್ಲೂ ಕೈಗಾರಿಕೆಗಳಿಗೆ ಶುದ್ಧ ನೀರನ್ನೇ ಬಳಕೆ ಮಾಡಲಾಗುತ್ತಿದೆ. ಅಲ್ಲದೇ ಕೈಗಾರಿಕೆಗಳಿಂದ ಗಾಳಿ, ನೀರು ಕಲುಷಿತವಾಗುತ್ತಿದೆ. ನೀರು ವ್ಯಯವಾಗುತ್ತಿದ್ದು ನೀರಿನ ಸದ್ಬಳಕೆ ಮಾಡುವಲ್ಲಿ ನಾವು ಮುಂದಾಗಬೇಕು ಎಂದು ಮನವಿ ಮಾಡಿದರು.
ಪ್ಲಾಸ್ಟಿಕ್ ಬಳಸುವವರೆಗೂ ತ್ಯಾಜ್ಯ ನಿಲ್ಲುವುದಿಲ್ಲ. ಇಂತಹ ತಪ್ಪನ್ನು ಮಾಡಬಾರದು. ಎಲ್ಪಿಜಿ ಇಂಧನದ ಬಳಕೆ ಹೇಗೆ ಕಡಿಮೆ ಮಾಡಬೇಕೆಂಬ ಬಗ್ಗೆ ಯೋಚಿಸಬೇಕು. ಇಂಧನವೆಂದರೆ ಸಿಲಿಂಡರ್ ಮಾತ್ರ ಅಲ್ಲ, ಮರುಉತ್ಪಾದನೆ ಇಂಧನಗಳ ಬಗ್ಗೆ, ಸೌರಶಕ್ತಿ ಬಳಕೆ ಬಗ್ಗೆ ಯುವ ಪೀಳಿಗೆಗೆ ಹೇಳುವ ಮೂಲಕ ಪರಿಸರ ಪ್ರಜ್ಞೆ ಮೂಡಿಸಬೇಕು. ಕಸದದಿಂದ ಇಂಧನ ತಯಾರಿಸುವ ಕುರಿತು ಹಾಗೂ ನೀರು, ಬಳಕೆ, ವಿದ್ಯುತ್ ಬಳಕೆ ಬಗ್ಗೆ, ಹಸಿರು ಹೊದಿಕೆ ಬೆಳೆಸುವುದು, ವಾಯು ಮಾಲಿನ್ಯದ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಬೇಕು ಎಂದರು. ರಮಣಶ್ರೀ ಫೌಂಡೇಶನ್ ಅಧ್ಯಕ್ಷ ನಾಡೋಜ ಎಸ್.ಷಡಕ್ಷರಿ ಅಧ್ಯಕ್ಷತೆ ವಹಿಸಿದ್ದರು. ಕೈಗಾರಿಕೋದ್ಯಮಿ ಬಿ.ಎಸ್.ಗೋವಿಂದ್ ಉಪಸ್ಥಿತರಿದ್ದರು.