ಬೆಂಗಳೂರು: ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ‘ಕಾಟೇರ’ 50ನೇ ದಿನದ ಸಂಭ್ರಮಾಚರಣೆ ನಡೆಯಿತು. ಸಿನಿಮಾ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಸಿನಿಮಾ ಈಗಾಗಲೇ ಓಟಿಟಿಗೆ ಬಂದಿದೆ. ಆದರೂ ಕೆಲವೆಡೆ ಸಿನಿಮಾ ಅತ್ಯದ್ಭುತ ಪ್ರದರ್ಶನ ಕಾಣುತ್ತಿದೆ. ಡಿ ಬಾಸ್ ಅಭಿಮಾನಿಗಳಿಗೆ ಗೊತ್ತಿರುವ ಹಾಗೆ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರ ದರ್ಶನ್ಗೆ ಅಚ್ಚು ಮೆಚ್ಚು. ಇಲ್ಲಿ ಬಿಡುಗಡೆಯಾದ ದರ್ಶನ್ ಯಾವುದೇ ಸಿನಿಮಾಗಳು ಯಶಸ್ವಿ ಪ್ರದರ್ಶನ ಕಂಡಿವೆ.
ಇದೀಗ ಪ್ರಸನ್ನ ಚಿತ್ರಮಂದಿರಕ್ಕೆ 50 ವರ್ಷ ತುಂಬಿದ್ದು, ‘ಕಾಟೇರ’ ಸಿನಿಮಾಗೂ 50 ದಿನ. ಈ ಹಿನ್ನೆಲೆಯಲ್ಲಿ ಸಂಭ್ರಮಾಚಣೆಯನ್ನು ಒಟ್ಟಿಗೆ ಆಚರಿಸಲಾಯಿತು. ಇಡೀ ಚಿತ್ರತಂಡ ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿತ್ತು.
ಈ ವೇದಿಕೆಯಲ್ಲಿ ಮಾತನಾಡಿದ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ಗೆ ಟಕ್ಕರ್ ಕೊಟ್ಟಿದ್ದಾರೆ. ಉಮಾಪತಿ ಶ್ರೀನಿವಾಸ್ ‘ಕಾಟೇರ’ ಕಥೆ, ಟೈಟಲ್ ಕೊಟ್ಟಿದ್ದು ನಾನು ಎಂದು ಹೇಳಿದ್ದರು. ಇದಕ್ಕೆ ದರ್ಶನ್ ಪ್ರತಿಕ್ರಿಯೆ ನೀಡಿದ್ದು, “ಕೆಲವರು ಕಥೆ ನಾನು ಮಾಡಿಸಿದೆ. ಟೈಟಲ್ ನಾನು ಕೊಟ್ಟೆ ಅಂತ ಹೇಳುತ್ತಿದ್ದಾರೆ. ಅಯ್ಯೋ ತಗಡೇ. ನಿನಗೆ ‘ರಾಬರ್ಟ್’ ಕಥೆ ಕೊಟ್ಟದ್ದೇ ನಾವು. ಕೊಟ್ಟಿದ್ದು ಮಾಡಿದ್ದು ಹೇಳಬಾರದು. ಇದೇ ರೀತಿ ಒಂದ್ಸಲ ಸಿಕ್ಕಿಹಾಕಿಕೊಂಡು ಹೇಳಿಸಿಕೊಂಡು ಬುದ್ದಿ ಕಲಿಯಲಿಲ್ಲ ಅಂದ್ರೆ ನಾವು ಏನು ಹೇಳೋಣ. ಇಂತಹ ಒಳ್ಳೆಯ ಕಥೆ ಯಾಕಪ್ಪಾ ಬಿಟ್ಟೆ ನೀನು?”.
“ನೀನು ಕಥೆ ಮಾಡಿಸಿದೆ ಅಲ್ವಾ? ಹಾಗಾದರೆ ಇಂತಹ ಒಳ್ಳೆ ಕಥೆ ಯಾಕೆ ಬಿಟ್ಟೆ? ನಿನ್ನ ಜಡ್ಜ್ಮೆಂಟ್ ಅಷ್ಟು ಚೆನ್ನಾಗಿದೆ ಗುಡ್. ನೀನು ಮಾಡಬಹುದಿತ್ತಲ್ಲ. ಟೈಟಲ್ ನಾನು ಕೊಟ್ಟೆ ಎನ್ನುತ್ತೀಯಾ. ‘ಕಾಟೇರ’ ಟೈಟಲ್ ಕೊಟ್ಟಿದ್ದು ನಾನು. ಅದಕ್ಕೂ ಸ್ಪಷ್ಟನೆ ಕೊಡುತ್ತೀನಿ. ಎಲ್ಲಾ ಆಧಾರ ಇಟ್ಟುಕೊಂಡು ಮಾತನಾಡಬೇಕು” ಎಂದು ಸ್ಪಷ್ಟಪಡಿಸಿದ್ದಾರೆ ದರ್ಶನ್.