ಮಡಿಕೇರಿ: ಅರೆಭಾಷಿಕ ಗೌಡ ಜನಾಂಗದವರಿಗೆ ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಮೊಟ್ಟಮೊದಲ ಬಾರಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಹಣಾಹಣಿ ಇಂದು(ಮೇ೨೮) ನಡೆಯಲಿದೆ.
ಶನಿವಾರ ಕ್ವಾಲಿಫೈಯರ್ನ ಪಂದ್ಯದಲ್ಲಿ ಟಾಸ್ ಸೋತ ಕಾಫಿ ಕ್ರಿಕೆಟರ್ಸ್ ತಂಡ ನಿಗದಿತ ೧೦ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೭೨ ರನ್ಗಳಿಸಿದರು. ಅನಿಲ್ ಕುಡೆಕಲ್ ೪ ಬೌಂಡರಿ ೧ ಸಿಕ್ಸರ್ ಸಹಾಯದೊಂದಿಗೆ ೩೪ ರನ್ಗಳಿಸಿದರು. ಎಲೈಟ್ ಕ್ರಿಕೆಟ್ ಕ್ಲಬ್ನ ಅವಿನ್ ೨ ವಿಕೆಟ್ ಪಡೆದರು.
ನಂತರ ಬ್ಯಾಟ್ ಮಾಡಿದ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ಒಂದು ವಿಕೆಟ್ ನಷ್ಟಕ್ಕೆ ೫.೫ ಓವರ್ನಲ್ಲಿ ೭೫ ರನ್ಗಳಿಸಿ ಗೆಲುವಿನ ನಗೆ ಬೀರಿತು. ಎಲೈಟ್ ಕ್ರಿಕೆಟ್ ಕ್ಲಬ್ ತಂಡದ ಪರವಾಗಿ ತಳೂರು ವಿಕ್ಕಿ ೨೪ ಎಸೆತಗಳಲ್ಲಿ ಭರ್ಜರಿ ೫ ಸಿಕ್ಸರ್, ೩ ಬೌಂಡರಿಗಳೊಂದಿಗೆ ೫೦ ರನ್ಗಳಿಸಿದರು. ಇದು ಈ ಕ್ರೀಡಾಕೂಟದ ಮೂರನೇ ಅರ್ಧ ಶತಕವಾಗಿದೆ. ಕಾಫಿ ಕ್ರಿಕೆಟರ್ಸ್ ಪರವಾಗಿ ಅನಿಲ್ ಕುಡೆಕಲ್ ೧ ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ಮೊದಲ ತಂಡವಾಗಿ ಫೈನಲ್ಸ್ ಪ್ರವೇಶಿಸಿತು.
ಎಲಿಮಿನೇಟರ್ ಪಂದ್ಯಾಟದಲ್ಲಿ ಟೀಂ ಭಗವತಿ ಮತ್ತು ಎಂಸಿಬಿ ಮುಖಾಮುಖಿಯಾಯಿತು. ಟಾಸ್ ಗೆದ್ದ ಎಂಸಿಬಿ ಕ್ಷೇತ್ರ ರಕ್ಷಣೆಯನ್ನು ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಟೀಂ ಭಗವತಿ ನಿಗದಿತ ೧೦ ಓವರ್ಗಳಲ್ಲಿ ೩ ವಿಕೆಟ್ಗೆ ೮೬ ರನ್ಗಳಿಸಿತು. ಕೊಂಬಾರನ ರಂಜು ೩ಸಿಕ್ಸರ್ ಜತೆಗೆ ೩೧ ರನ್ಗಳಿಸಿದರು. ಎಂಸಿಬಿ ಪರವಾಗಿ ಮುನೀಶ್ ಬೈಲೆ ೨ ವಿಕೆಟ್ ಪಡೆದರು.
ನಂತರ ಬ್ಯಾಟ್ ಮಾಡಿದ ಎಂಸಿಬಿ ೯.೪ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೮೭ ರನ್ ಗಳಿಸಿ ಗೆಲುವಿನ ನಗೆ ಬೀರಿದರು. ಎಂಸಿಬಿ ತಂಡದ ಪರವಾಗಿ ಮುನೀಶ್ ಬೈಲೆ ೨ ಸಿಕ್ಸರ್, ೩ ಬೌಂಡರಿ ಜೊತೆಗೆ ೩೫ ರನ್ ಪಡೆದರು. ಭಗವತಿ ಪರವಾಗಿ ಬೇಕಲ್ ವರುಣ್ ರಾಜ್, ಕುಟ್ಟನ ಪ್ರಶಾಂತ್, ಜಗತ್ ದಂಬೆಕೋಡಿ ತಲಾ ಒಂದು ವಿಕೆಟ್ ಪಡೆದರು.
ಈ ಪಂದ್ಯಾಟದಲ್ಲಿ ಅಣ್ಣತಮ್ಮ ಎದುರಾಳಿಯಾಗಿ ಆಡಿದ್ದು ವಿಶೇಷವಾಗಿತ್ತು. ಅಣ್ಣ ಕೊಂಬಾರನ ಹರ್ಷ ಎಂಸಿಬಿ ಪರವಾಗಿ, ತಮ್ಮ ಕೊಂಬಾರನ ರಂಜು ಭಗವತಿ ತಂಡದ ಪರ ಆಡಿದರು. ಹರ್ಷನ ಬೌಲಿಂಗಿಗೆ ರಂಜು ಸಿಕ್ಸರ್ಗಳಿಸಿದ್ದು, ನಂತರ ರಂಜುನ ಬೌಲಿಂಗಿಗೆ ಹರ್ಷ ಸಿಕ್ಸರ್ಗಳಿಸಿ ಸೇಡು ತೀರಿಸಿಕೊಂಡರು.