ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯವಾಗುವಂತಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೂರಾರು ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ವ್ಯತ್ಯಯವಾಗುತ್ತಿದೆ. ಆದರೆ, ಶುಕ್ರವಾರ ಮಳೆ ಜತೆಗೆ ಭಾರಿ ಗಾಳಿ ಬೀಸಿದ ಪರಿಣಾಮ ರಾಜಧಾನಿಯಲ್ಲಿ 150ಕ್ಕೂ ಹೆಚ್ಚು ಕಂಬಗಳು ಬಿದ್ದು, ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಇನ್ನು ಕೆಲವೆಡೆ ಟ್ರಾನ್ಸ್ ಫಾರ್ಮರ್ಗೆ ಧಕ್ಕೆಯಾಯಿತು. ಹೀಗಾಗಿ ಬೆಂಗಳೂರು ದಕ್ಷಿಣ, ಉತ್ತರ ಭಾಗಗಳ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು.
ನೆರವಾಗದ ಸಹಾಯವಾಣಿವಿದ್ಯುತ್ ವ್ಯತ್ಯಯ ಕುರಿತಂತೆ ಶುಕ್ರವಾರ ಒಂದೇ ದಿನ ಬೆಸ್ಕಾಂ ಸಹಾಯವಾಣಿ 1,912ಗೆ ಸಾವಿರಾರು ಕರೆಗಳು ಬಂದಿವೆ. ಆದರೆ, ಕರೆ ಸ್ವೀಕರಿಸಿದ ಸಿಬ್ಬಂದಿ ಸಮಸ್ಯೆ ಆಲಿಸದೆ ಕರೆಗಳನ್ನು ಕಡಿತಗೊಳಿಸುತ್ತಿದ್ದರು. ಹೀಗಾಗಿ ಜನರು ಯಾರಿಗೆ ಸಮಸ್ಯೆ ಹೇಳಿಕೊಳ್ಳಬೇಕೆಂದು ತಿಳಿಯದಂತಾಗಿತ್ತು. ವಿದ್ಯುತ್ ವ್ಯತ್ಯಯ ಕುರಿತಂತೆ ಬೆಸ್ಕಾಂ ಟ್ವಿಟರ್ನಲ್ಲಿ ಮಾಹಿತಿ ನೀಡಿತ್ತು. ರಾತ್ರಿ 8 ಗಂಟೆ ನಂತರ ಎಲ್ಲವೂ ಸರಿಯಾಗಿ, ವಿದ್ಯುತ್ ಪೂರೈಕೆಯಾಗಲಿದೆ ಎಂದು ತಿಳಿಸಲಾಗಿತ್ತು. ಆದರೆ, ಮಧ್ಯರಾತ್ರಿ 12 ಗಂಟೆಯಾದರೂ ವಿದ್ಯುತ್ ಪೂರೈಕೆ ಮಾಡುವಲ್ಲಿ ಬೆಸ್ಕಾಂ ವಿಫಲವಾಯಿತು.
ವಿದ್ಯುತ್ ತಂತಿ ಹಾಗೂ ಕಂಬದ ಮೇಲೆ ಮರಗಳು ಬಿದ್ದಿದ್ದರಿಂದ ಯಶವಂತಪುರ ಸೇರಿ ಅನೇಕ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಈ ಕುರಿತು ಸಾರ್ವಜನಿಕರು ಬೆಸ್ಕಾಂ ಸಹಾಯವಾಣಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೂರು ನೀಡುತ್ತಿದ್ದರು. ಅನೇಕ ಕಡೆಗಳಲ್ಲಿ ಬಿಬಿಎಂಪಿ ಹಾಗೂ ಬೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸಿ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಿದರು.
ಇದನ್ನೂ ಓದಿ: ಮಳೆಯ ಅಬ್ಬರಕ್ಕೆ ಬೆದರಿದ ರಾಜಧಾನಿ
ಸಂಜೆ 5 ಗಂಟೆಗೆ ಮಳೆ ಆರಂಭವಾಗುತ್ತಿದ್ದಂತೆ ಎಲ್ಲೆಡೆ ವಿದ್ಯುತ್ ಕಡಿತವಾಗಿತ್ತು. ನಂತರ ಕೆಲವೆಡೆ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲಾಯಿತಾದರೂ, ರಾತ್ರಿ 7 ಗಂಟೆ ನಂತರ ಮತ್ತೆ ವಿದ್ಯುತ್ ವ್ಯತ್ಯಯ ಉಂಟಾಯಿತು. ರಾತ್ರಿ 12 ಗಂಟೆಯವರೆಗೂ ವಿದ್ಯುತ್ ಪೂರೈಕೆ ಸರಿಪಡಿಸುವಲ್ಲಿ ಬೆಸ್ಕಾಂ ವಿಫಲವಾದ ಕಾರಣ ಜಯನಗರ, ಹೆಬ್ಬಾಳ, ಚಾಮರಾಜಪೇಟೆ, ಎಚ್ಎಸ್ಆರ್ ಲೇಔಟ್, ಬಸವಗುಡಿ ಮತ್ತಿತರ ಬಡಾವಣೆಗಳ ನಿವಾಸಿಗಳು ಸಮಸ್ಯೆ ಅನುಭವಿಸಿದರು.