ಬೆಂಗಳೂರು: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜಧಾನಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಶುಕ್ರವಾರ ಮತ್ತಷ್ಟು ಅನಾಹುತಗಳು ಸಂಭವಿಸಿವೆ. ಗಾಳಿಸಹಿತ ಭಾರಿ ಮಳೆ ಪರಿಣಾಮ ವಿವಿಧೆಡೆ 50ಕ್ಕೂ ಹೆಚ್ಚು ಮರಗಳು ಬಿದ್ದಿದ್ದು,ನೂರಾರು ಮರಗಳ ರೆಂಬೆ ಮುರಿದುಬಿದ್ದಿವೆ. ಮರದಡಿ ಇದ್ದ ಕಾರು, ದ್ವಿಚಕ್ರ ವಾಹನಗಳು ನಜ್ಜುಗುಜ್ಜಾಗಿವೆ.
ಇದನ್ನೂ ಓದಿ: ಅನಾರೋಗ್ಯದ ನೆಪವೊಡ್ಡಿದ ಸಿಸಿಬಿ ಎಸಿಪಿ
ವಿಧಾನಸೌಧ ಹಿಂಭಾಗ, ವೀರಣ್ಣನ ಪಾಳ್ಯ, ರಾಜಾಜಿನಗರ 6ನೇ ಬ್ಲಾಕ್,ವೈಯಾಲಿಕಾವಲ್, ಕಾವೇರಿ ಚಿತ್ರ ಮಂದಿರ, ಡಾ.ರಾಜ್ಕುಮಾರ್ ರಸ್ತೆ, ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ಬಳಿ, ಈಸ್ಟ್ ಪಾರ್ಕ್ ರಸ್ತೆ, ಸಿಎಂ ಗೃಹಕಚೇರಿ ಕೃಷ್ಣಾ ಬಳಿ, ಚಾಮರಾಜಪೇಟೆಯ ಟಿ.ಆರ್. ಮಿಲ್, ಕಲಾಸಿಪಾಳ್ಯ ವೃತ್ತ, ಮಾರಪ್ಪ ಗಾರ್ಡನ್, ಪಟ್ಟೇಗಾರಪಾಳ್ಯ, ಸಿರ್ಸಿ ವೃತ್ತ, ಕನ್ನಿಂಗ್ಹ್ಯಾಮ್ ರಸ್ತೆ, ಥಣಿಸಂದ್ರ ಮುಂತಾದೆಡೆ ಮರಗಳು ಹಾಗೂ ರೆಂಬೆಗಳು ಬಿದ್ದ ವರದಿಯಾಗಿದೆ. ಕಬ್ಬನ್ ಪಾರ್ಕ್ ಒಳಗಿರುವ ಬೆಂಗಳೂರು ಪ್ರೆಸ್ಕ್ಲಬ್ ಆವರಣದಲ್ಲಿ ಕೆಲ ಮರಗಳು ಬಿದ್ದಿದ್ದರಿಂದ ಕಟ್ಟಡಕ್ಕೂ ಅಲ್ಪ ಹಾನಿಯಾಯಿತು. ಕೆ.ಆರ್.ವೃತ್ತದ ಅಂಡರ್ಪಾಸ್ನಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದರು.
ಇದನ್ನೂ ಓದಿ: ಬೆಂಗ್ಳೂರಲ್ಲಿ ಮುನ್ನೂರು ದಾಟಿದ ಸೋಂಕಿತರ ಸಂಖ್ಯೆ
ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ಬಳಿ, ಚಾಮರಾಜಪೇಟೆ, ಮಲ್ಲೇಶ್ವರದಲ್ಲಿ ಮರದಡಿ ಕಾರು, ದ್ವಿಚಕ್ರ ವಾಹನಗಳು ಜಖಂ ಆದವು. ವಿದ್ಯಾರಣ್ಯಪುರ ಬಳಿಯ ಆನಂದ್ ಗ್ಯಾಸ್ ಏಜೆನ್ಸಿಯೆದುರು ಸಿಲಿಂಡರ್ ತುಂಬಿಕೊಂಡಿದ್ದ ಆಟೋ ಹಾಗೂ ಜಯಮಹಲ್ ಎಕ್ಸ್ಟೆನ್ಷನ್ನಲ್ಲಿ ಪ್ರಯಾಣಿಕರ ಆಟೋ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.