ಮಂಡ್ಯ: ವಿಧಾನಸಭಾ ಚುನಾವಣೆಗೆ ಮತದಾನ ಮುಕ್ತಾಯವಾಗಿದೆ. ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಶೇ.84ರಷ್ಟು ಮತದಾನವಾಗಿದೆ. ಈ ಮೂಲಕ ಮತದಾರರು ಭಾರಿ ಹುಮ್ಮಸ್ಸಿನಿಂದ ಮತ ಚಲಾಯಿಸಿದ್ದಾರೆ. ಈ ಪ್ರಮಾಣದ ಮತದಾನವನ್ನು ನೋಡಿದರೆ ಇದು ಆಡಳಿತ ವಿರೋಧಿ ಅಲೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಜನರು ಈ ಬಾರಿ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎಂಬುದು ಜನ ಬೆಂಬಲದಿಂದ ಗೊತ್ತಾಗುತ್ತದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಕನಿಷ್ಟ 140 ಸ್ಥಾನಗಳನ್ನು ಪಡೆದು ಪೂರ್ಣ ಬಹುಮತದಿಂದ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ. ಅಂತೆಯೇ ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರವನ್ನೂ ಕಾಂಗ್ರೆಸ್ ಗೆಲ್ಲಲಿದೆ. ಈ ಹಿನ್ನೆಲೆಯಲ್ಲಿ ಮತದಾರ ಪ್ರಭುಗಳಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
ಈ ಬಾರಿಯ ಚುನಾವಣೋತ್ತರ ಸಮೀಕ್ಷೆ ಸಹ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ಇನ್ನು ಇದಕ್ಕೆ ಕಾರಣವೂ ಇದೆ. ಬಡವರ, ದೀನದಲಿತರ ಪರವಾಗಿ ಕಾಂಗ್ರೆಸ್ ನಿಂತಿರುವುದು ಎಂಬುದು ಸಹ ಅಷ್ಟೇ ಸತ್ಯವಾಗಿದೆ. ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಮೂಲಕ 2 ಸಾವಿರ ರೂ ಪ್ರೋತ್ಸಾಹಧನ, 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರೋದ್ಯೋಗಿ ಯುವಕರಿಗೆ 3 ಸಾವಿರ ರೂ ಪ್ರೋತ್ಸಾಹಧನ, ಬಡವರಿಗೆ 10 ಕೆಜಿ ಅಕ್ಕಿ ಸೇರಿದಂತೆ ಇನ್ನಿತರ ಜನಪರ ಕಾರ್ಯಕ್ರಮವನ್ನು ಕಾಂಗ್ರೆಸ್ ಘೋಷಿಸಿದೆ. ಇದು ಪಕ್ಷದತ್ತ ಜನರು ಬರಲು ಕಾರಣವಾಗಿದೆ. ಮತದಾನ ಮಾಡಿದ ಎಲ್ಲ ಮತದಾರರಿಗೂ ಧನ್ಯವಾದವನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.