ಹೈದರಾಬಾದ್: ತೆಲಂಗಾಣದ ದಿನಪತ್ರಿಕೆಗಳಲ್ಲಿ ಗ್ಯಾರಂಟಿ ಯೋಜನೆಗಳು ಸೇರಿದಂತೆ ತನ್ನ ಸಾಧನೆಗಳ ಜಾಹೀರಾತು ನೀಡಿದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಭಾರತೀಯ ಚುನಾವಣಾ ಆಯೋಗ ಸೋಮವಾರ (ನ.27) ನೋಟಿಸ್ ಕಳುಹಿಸಿದೆ.
ನೋಟಿಸ್ಗೆ ನವೆಂಬರ್ 28ರಂದು ಸಂಜೆ 5 ಗಂಟೆಯ ಒಳಗೆ ಉತ್ತರ ನೀಡುವಂತೆ ಚುನಾವಣಾ ಆಯೋಗ ಕೇಳಿದೆ. ಈ ವಿಚಾರವನ್ನು ಬಿಜೆಪಿ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ತಮ್ಮ ಗಮನಕ್ಕೆ ತಂದಿರುವುದಾಗಿ ಆಯೋಗ ಹೇಳಿದೆ. ಇಂತಹ ಜಾಹೀರಾತುಗಳು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆಯೋಗ ತಿಳಿಸಿದೆ.
ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗೆ ಕಾರಣವಾದ ಸಂದರ್ಭಗಳನ್ನು ವಿವರಿಸಲು ಮತ್ತು ಇಂತಹ ಯಾವುದೇ ಜಾಹೀರಾತುಗಳನ್ನು ತಕ್ಷಣವೇ ಜಾರಿಗೆ ಬರುವಂತೆ ನಿಲ್ಲಿಸಲು ಕರ್ನಾಟಕ ಸರ್ಕಾರಕ್ಕೆ ಆಯೋಗ ಸೂಚನೆ ನೀಡಿದೆ. ಅಕ್ಟೋಬರ್ನಲ್ಲಿ ತಾನು ನೀಡಿದ ಸೂಚನೆಯನ್ನು ಉಲ್ಲೇಖಿಸಿದ ಆಯೋಗ, ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಚುನಾವಣಾ ರಹಿತ ರಾಜ್ಯಗಳು ತಮ್ಮ ಜಾಹಿರಾತುಗಳನ್ನು ಪ್ರಕಟಿಸಲು ಆಯೋಗದಿಂದ ಅಗತ್ಯ ಅನುಮೋದನೆಗಳನ್ನು ಪಡೆಯಬೇಕು ಎಂದು ಹೇಳಿದೆ.
ಮಾದರಿ ನೀತಿ ಸಂಹಿತೆಯಡಿಯಲ್ಲಿ ಅಗತ್ಯವಿರುವ ಕಾರ್ಯವಿಧಾನವನ್ನು ಉಲ್ಲಂಘಿಸಿದ್ದಕ್ಕಾಗಿ ಕರ್ನಾಟಕದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಕಾರ್ಯದರ್ಶಿ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ಚುನಾವಣಾ ಸಂಸ್ಥೆ ಕೇಳಿದೆ.
ನಿನ್ನೆಯಷ್ಟೇ ಚುನಾವಣಾ ಆಯೋಗವು ತೆಲಂಗಾಣದಲ್ಲಿ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಸರ್ಕಾರಕ್ಕೆ ರೈತ ಬಂಧು ಯೋಜನೆಯಡಿ ರೈತರಿಗೆ ತಮ್ಮ ರಬಿ ಬೆಳೆಗಳನ್ನು ಬೆಳೆಯಲು ಹಣಕಾಸಿನ ನೆರವು ವಿತರಣೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿತ್ತು. ಈ ಕ್ರಮದ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡುವ ಮೂಲಕ ರಾಜ್ಯ ಸಚಿವರು ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಸಂಸ್ಥೆ ಹೇಳಿತು. ಬಿಆರ್ಎಸ್ ಮೇಲೆ ನಿರ್ಬಂಧಗಳನ್ನು ಹೇರಲು ಕಾಂಗ್ರೆಸ್ ಮನವಿ ಮಾಡಿದ ನಂತರ ಆಯೋಗ ಈ ನಿರ್ಧಾರ ಮಾಡಿತು.
ಅಂದಹಾಗೆ 119 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ತೆಲಂಗಾಣಕ್ಕೆ ನವೆಂಬರ್ 30ರಂದು ಮತದಾನ ನಡೆಯಲಿದೆ. (ಏಜೆನ್ಸೀಸ್)
ಬೀದಿಗಳಿಂದ ಕ್ರೀಡಾಂಗಣದವರೆಗೆ: ಮಾ.2 ರಿಂದ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿ
ಕ್ಯಾಷಿಯರ್ ಸುಲಿಗೆ ಮಾಡಿದ್ದ ನಾಲ್ವರ ಬಂಧನ: ಬಾರ್ಗೆ ನುಗ್ಗಿ ನುಗ್ಗಿ ಮಾರಕಾಸ್ತ್ರ ತೋರಿಸಿ ಸುಲಿಗೆ
ನೀವು ನೋಡಿದ್ದು ಕಾಂತಾರ 2,ಇದು ಕಾಂತಾರ 1; ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ರು ರಿಷಬ್ ಶೆಟ್ಟಿ