ಉಳ್ಳಾಲ: ಮುಡಿಪು ಜಂಕ್ಷನ್ನಲ್ಲಿ ಕಳೆದ ವಾರ ರಸ್ತೆ ಬಂದ್ ಮಾಡಿ ನಡೆಸಲಾಗಿದ್ದ ಇಫ್ತಾರ್ ಕೂಟ ಆಯೋಜಕರಿಗೆ ಚುನಾವಣಾ ಆಯೋಗ ತುರ್ತು ನೋಟಿಸ್ ನೀಡಿದೆ.
ಮುಡಿಪು ಜಂಕ್ಷನ್ನಲ್ಲಿ ಸ್ಥಳೀಯ ಆಟೋ ಚಾಲಕರ ಸಂಘದಿಂದ ಕಳೆದ ಶುಕ್ರವಾರ ಸಾರ್ವಜನಿಕ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಇದಕ್ಕಾಗಿ ರಸ್ತೆಯ ಒಂದು ಬದಿ ಬಂದ್ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸರ್ವ ಧರ್ಮೀಯರು, ಎಲ್ಲ ರಾಜಕೀಯ ಪಕ್ಷದವರು ಭಾಗವಹಿಸಿದ್ದರು. ರಸ್ತೆ ಬಂದ್ ಮಾಡಿ ಕಾರ್ಯಕ್ರಮ ನಡೆಸಿದ್ದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಪರ ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಹಿಂದು ಸಂಘಟನೆಯೊಂದು ಸಹಾಯಕ ಚುನಾವಣಾ ಆಯುಕ್ತರಿಗೆ ದೂರು ನೀಡಿತ್ತು. ಇದರ ಆಧಾರದಲ್ಲಿ ಕಾರ್ಯಕ್ರಮ ಸಂಘಟಿಸಿದ್ದ ಸಂಘದ ಅಧ್ಯಕ್ಷರಿಗೆ ಚುನಾವಣಾ ಆಯೋಗದಿಂದ ತುರ್ತು ನೋಟಿಸ್ ನೀಡಲಾಗಿದೆ.