ಮೂಡಿಗೆರೆ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಬೆಳೆಗಾರರು ಹಾಗೂ ವಿವಿಧ ರಾಜಕೀಯ ಪಕ್ಷಗಳು 18 ಗ್ರಾಪಂ ವ್ಯಾಪ್ತಿಯ 31 ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸಿದರೂ ವಿವಿಧ ರಾಜಕೀಯ ಪಕ್ಷಗಳ ಸಮನ್ವಯ ಕೊರತೆಯಿಂದ ಊರುಬಗೆ ಗ್ರಾಪಂ ಹೊರತುಪಡಿಸಿ ಉಳಿದ ಗ್ರಾಪಂ ವ್ಯಾಪ್ತಿಯಲ್ಲಿ ನಾಮಪತ್ರ ಸಲ್ಲಿಕೆಯಾಗಿದೆ.
ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೊಳಪಡುವ ಗ್ರಾಪಂಗಳಾದ ಊರುಬಗೆ, ತ್ರಿಪುರ, ಬೆಟ್ಟಗೆರೆ, ಬಿದರಹಳ್ಳಿ, ಬಣಕಲ್, ತರುವೆ, ಕುಂದೂರು, ಬಿ.ಹೊಸಳ್ಳಿ, ಬಾಳೂರು, ಜಾವಳಿ, ಸುಂಕಸಾಲೆ, ಕೂವೆ, ನಿಡುವಾಳೆ, ಕಳಸ, ಸಂಸೆ, ಇಡಕಿಣಿ, ತೋಟದೂರು, ಹೊರನಾಡು ಗ್ರಾಪಂಗಳ ಪೈಕಿ ಊರುಬಗೆಯಲ್ಲಿ ಬಹಿಷ್ಕಾರ ನಿರ್ಧಾರ ಪಾಲನೆಯಾಗಿದೆ. ಹೊರನಾಡು ಗ್ರಾಪಂನಲ್ಲಿ ಕೊನೇ ದಿನ 7 ಸ್ಥಾನಕ್ಕೆ 33 ನಾಮಪತ್ರ ಸಲ್ಲಿಕೆಯಾಗಿದೆ.
ತಾಲೂಕಿನ 25 ಗ್ರಾಪಂಗಳಿಗೆ ಒಟ್ಟು 978 ನಾಮಪತ್ರ ಸಲ್ಲಿಕೆಯಾಗಿದೆ. 281 ಸ್ಥಾನಕ್ಕೆ 105 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. 145 ಬೂತ್ ಸ್ಥಾಪಿಸಲಾಗಿದೆ. 43,055 ಪುರುಷರು, 44,820 ಮಹಿಳೆಯರು, ಇತರೇ 5 ಜನರು ಸೇರಿ ಒಟ್ಟು 87,880 ಮಂದಿ ಮತ ಚಲಾಯಿಸಲಿದ್ದಾರೆ. ಊರುಬಗೆ ಗ್ರಾಪಂನಂತೆ ಕಸ್ತೂರಿ ರಂಗನ್ ವರದಿ ವ್ಯಾಪ್ತಿಯ 14 ಗ್ರಾಪಂಗಳಲ್ಲಿ ಈಗ ಸಲ್ಲಿಕೆಯಾಗಿರುವ ನಾಮಪತ್ರ ವಾಪಸ್ ಪಡೆದು ಚುನಾವಣೆ ಬಹಿಷ್ಕಾರ ಮುಂದುವರಿದರೆ ಗ್ರಾಪಂ ಚುನಾವಣೆ ಬುಹಿಷ್ಕಾರ ಸಫಲವಾಗಲಿದೆ.