ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ತಲಾ ಐದು ಕೆಜಿ ಅಕ್ಕಿ ಪೂರೈಕೆಗೆ ಆಸಕ್ತ ರಾಜ್ಯಗಳಿಂದ ಅಕ್ಕಿ ಖರೀದಿ ಮಾತುಕತೆ ಬಹುತೇಕ ಅಂತಿಮವಾಗಿದೆ. ಮುಂದಿನ ತಿಂಗಳಿಂದ ಪಡಿತರ ಚೀಟಿದಾರರಿಗೆ ವಿತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳು ಮುಂದೆ ಬಂದಿವೆ. ಆದರೆ ದೂರ ಅಂತರ, ಸಾಗಣೆ ವೆಚ್ಚ ದುಬಾರಿ ಎಂಬ ಕಾರಣಕ್ಕೆ ಇವೆರಡೂ ರಾಜ್ಯಗಳ ಪ್ರಸ್ತಾವನೆ ಕೈಬಿಡಲಾಗಿದೆ.
ಛತ್ತೀಸಗಢ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಕೋರಿಕೆಯಷ್ಟು ಎ್ಸಿಐ ನಿಗದಿತ ದರದಲ್ಲಿ ಪೂರೈಸಲು ಒಪ್ಪಿಕೊಂಡಿವೆ. ಪ್ರತಿ ಕೆಜಿಗೆ 34 ರೂ.ಗಳಾಗಲಿದ್ದು, ಸಾಗಣೆ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ ಮುನಿಯಪ್ಪ ತಿಳಿಸಿದರು.
‘ಶೀಘ್ರ’ ಯಾವಾಗ ಬರುತ್ತದೆ ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಪೂರೈಕೆ ಭರವಸೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ತಲಾ ಐದು ಕೆಜಿ ಹೆಚ್ಚುವರಿ ಅಕ್ಕಿ ವಿತರಣೆಗೆ ಬೇಕಿರುವಷ್ಟು ಅಕ್ಕಿ ಸಕಾಲಕ್ಕೆ ಲಭ್ಯವಾಗಿಲ್ಲ.
ಅಕ್ಟೋಬರ್ನಲ್ಲಿ ವಿತರಣೆಗೆ ಪ್ರಯತ್ನ
ಈ ಹಿನ್ನೆಲೆಯಲ್ಲಿ 1.08 ಕೋಟಿ ಬಿಪಿಎಲ್ ಪಡಿತರ ಚೀಟಿಯುಳ್ಳ ನಾಲ್ಕು ಕೋಟಿ ಜನರಿಗೆ ಐದು ಅಕ್ಕಿ ಮೊತ್ತವನ್ನು ನಗದು ರೂಪದಲ್ಲಿ ಭರಿಸುತ್ತಿದ್ದೇವೆ. ತಲಾ 170 ರೂ. ಆಯಾ ಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದು, ಅಕ್ಟೋಬರ್ನಲ್ಲಿ ನಗದು ಬದಲು ಅಕ್ಕಿ ಪೂರೈಸುವುದಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು.
ಅಕ್ಕಿ ಒದಗಿಸಲು ಮುಂದೆ ಬಂದ ರಾಜ್ಯ ಸರ್ಕಾರಗಳ ಜತೆಗೆ ನೇರ ಮಾತುಕತೆಯಾಗಿದೆ. ಹೀಗಾಗಿ ಟೆಂಡರ್ ಕರೆಯುವ ಪ್ರಶ್ನೆ ಉದ್ಭವಿಸುವುದಿಲ್ಲ. ಖಾಸಗಿ ಕಂಪನಿಗಳು ಅಥವಾ ಮುಕ್ತ ಮಾರುಕಟ್ಟೆ ಖರೀದಿ ಸಂದರ್ಭದಲ್ಲಿ ಟೆಂಡರ್ ಕರೆಯಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸಿಎಂ ಜತೆಗೆ ಚರ್ಚಿಸಿ ಚಾಲನೆ
ಹೆಚ್ಚುವರಿಯಾಗಿ ಐದು ಕೆಜಿ ವಿತರಣೆಗೆ ಮಾಸಿಕ 2.40 ಲಕ್ಷ ಟನ್ ಅಕ್ಕಿ ಬೇಕಾಗಿದೆ. ಆಸಕ್ತ ರಾಜ್ಯಗಳೊಂದಿಗೆ ಚರ್ಚೆ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಜತೆಗೆ ಚರ್ಚಿಸಿದ ನಂತರ ಖರೀದಿ ಪ್ರಕ್ರಿಯೆ ಚಾಲನೆ ಸಿಗಲಿದೆ ಎಂದರು.
ಅಕ್ಕಿ ಖರೀದಿ ಪ್ರಸ್ತಾಪಕ್ಕೆ ಆರ್ಥಿಕ ಇಲಾಖೆ ಅನುಮೋದನೆ ಸಮಸ್ಯೆಯಿಲ್ಲ. ನೇರ ಸಿಎಂ ಸೂಚನೆ ಪ್ರಕಾರ ನೆರೆಯ ರಾಜ್ಯಗಳ ಜತೆಗೆ ಅಕ್ಕಿ ಖರೀದಿ ಮಾತುಕತೆ ನಡೆದಿದೆ. ಅನ್ಯಭಾಗ್ಯ ಯೋಜನೆ ಆಶ್ವಾಸನೆ ಈಡೇರಿಸಲು ಹಣಕಾಸಿನ ಮುಗ್ಗಟ್ಟು ತಲೆದೋರದು ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.