More

    ಮೌಲ್ಯಗಳಿಲ್ಲದ ಶಿಕ್ಷಣ ಚುಕ್ಕಾಣಿ ಇಲ್ಲದ ಹಡಗಿನಂತೆ

    ಶಿವಮೊಗ್ಗ: ಪಡೆದ ಶಿಕ್ಷಣವನ್ನು ಬಳಸಿಕೊಂಡು ಸಮಸಮಾಜ ನಿರ್ಮಾಣ ಮಾಡಲು ಸಂಘಟಿತರಾಗಬೇಕೆಂದು ಕರ್ನಾಟಕ ಕಾನೂನು ವಿವಿ ಕುಲತಿಪತಿ ಡಾ.ಸಿ.ಬಸವರಾಜ್ ಹೇಳಿದರು.

    ಸಿ.ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ ಹಾಗೂ ಕಾನೂನು ಸ್ನಾತಕೋತ್ತರ ಅಧ್ಯಯನ ಕೇಂದ್ರದಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾನೂನು ಶಿಕ್ಷಣ ಸಮಾಜದ ಮೇಲೆ ಅತ್ಯಧಿಕ ಪರಿಣಾಮಗಳನ್ನು ಬೀರುತ್ತಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ವಕೀಲರ ಪಾತ್ರ ಮಹತ್ವದಾಗಿದೆ. ಸಮಾಜದಲ್ಲಿ ಅನೇಕರು ನ್ಯಾಯದಿಂದ ವಂಚಿತರಾಗಿದ್ದಾರೆ. ವಂಚನೆಗೊಳಗಾದವರಿಗೆ ಸಂವಿಧಾನದ ಪ್ರತಿಯೊಂದು ಆಶಯಗಳು ತಲುಪುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕಾನೂನು ವಿದ್ಯಾರ್ಥಿಗಳ ಮೇಲಿದೆ ಎಂದರು.
    ಸಂವಿಧಾನದ ಆಶಯ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುತ್ತಿಲ್ಲ. ಅನಿಷ್ಟ ಪದ್ಧತಿಗಳಿಂದ ಸಮಾಜದಲ್ಲಿ ಅಸಮತೋಲನ ಉಂಟಾಗಿದೆ. ಮರ್ಯಾದೆ ಹತ್ಯೆ, ದೌರ್ಜನ್ಯಗಳು ಇಂದಿಗೂ ನಡೆಯುತ್ತಿವೆ. ನೂರಾರು ವಕೀಲರು ನಮ್ಮ ನಡುವೆ ಇದ್ದರೂ ನೊಂದವರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
    ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅಷ್ಟೇ ವೇಗದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಮೌಲ್ಯಗಳಿಲ್ಲದ ಶಿಕ್ಷಣ ಚುಕ್ಕಾಣಿಯಿಲ್ಲದ ಹಡಗಿನಂತೆ. ಉದ್ಯೋಗ ನೀಡುವ ಶಿಕ್ಷಣವಷ್ಟೆ ಸಮಾಜಕ್ಕೆ ಬೇಕಾಗಿಲ್ಲ. ಮೌಲ್ಯಗಳನ್ನು ಬಿತ್ತುವ ಜವಾಬ್ದಾರಿ ಶಿಕ್ಷಕರು ವಿದ್ಯಾಸಂಸ್ಥೆಗಳ ಮೇಲಿದ್ದು, ಕ್ರಿಯಾಶೀಲತೆ ಉನ್ನತೀಕರಿಸುವ ಯಾವುದೇ ಪೂರಕ ವೇದಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಿ ಎಂದರು.
    ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಇತರರಿಗಿಂತ ಭಿನ್ನ. ಸಮಾಜದ ಅನೇಕ ವಲಯಗಳನ್ನು ಬದಲಾವಣೆ ಮಾಡುವ ಜವಾಬ್ದಾರಿ ಕಾನೂನು ವಿದ್ಯಾರ್ಥಿಗಳ ಮೇಲಿದೆ. ಕಾನೂನು ಪದವಿ ಪಡೆದು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುವ ಮುಕ್ತ ಅವಕಾಶಗಳಿವೆ ಎಂದು ಹೇಳಿದರು.
    ಎನ್‌ಇಎಸ್ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಯೋಜಕ ಡಾ.ಎಸ್.ಕಾಂತರಾಜ, ಪ್ರಾಧ್ಯಾಪಕರಾದ ಡಾ.ಬಿ.ಸಿ.ಬಸಪ್ಪ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts