ಗೊಳಸಂಗಿ: ಪಾಲಕರು ತಮ್ಮ ಮಕ್ಕಳು ಭವಿಷ್ಯದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡುತ್ತಾರೆ. ಆದರೆ ಓದು-ಬರಹದ ಹೊರತಾಗಿಯೂ ಮನುಷ್ಯ ಬದುಕಿನಲ್ಲಿ ಮೇಲೆ ಬರಬಲ್ಲ ಎಂಬ ಮಾತಿಗೆ ಇಂದಿನ ಈ ಕ್ರೀಡಾ ವಿಜೇತರು ಜೀವಂತ ಸಾಕ್ಷಿಯಾಗಿದ್ದಾರೆ ಎಂದು ಎನ್ಟಿಪಿಸಿ ಒ ಆ್ಯಂಡ್ ಎಂ ಡಿಜಿಎಂ ಅಣ್ಣಾಮಲೈ ಹೇಳಿದರು.
ಸಮೀಪದ ಕೂಡಗಿ ಎನ್ಟಿಪಿಸಿ ವ್ಯಾಪ್ತಿಯ ಮಹಾಶಕ್ತಿನಗರದ ಬಾಲಭಾರತಿ ಪಬ್ಲಿಕ್ ಸ್ಕೂಲ್ನಲ್ಲಿ ವಿಜಯಪುರ, ಬಾಗಲಕೋಟ ಮತ್ತು ಬೆಳಗಾವಿ ಜಿಲ್ಲೆಗಳ ಆಯ್ದ ಶಾಲೆಗಳ ಮಕ್ಕಳಿಗಾಗಿ ಶನಿವಾರ ಆಯೋಜಿಸಲಾಗಿದ್ದ ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಚೆಸ್ ಆಟಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಕರ್ತ ಡಿ.ಬಿ. ಕುಪ್ಪಸ್ತ ಮಾತನಾಡಿ, ಮನುಷ್ಯ ಯಶಸ್ಸಿನ ಪಥದತ್ತ ಸಾಗುವಾಗ ಸೋಲು-ಗೆಲುವು ಸಾಮಾನ್ಯ. ಗೆಲುವಿಗೆ ಹಿಗ್ಗದೆ ಸೋಲಿಗೆ ಕುಗ್ಗದೇ ಎದುರಿಸುವಂತ ಗಟ್ಟಿ ಮನಸ್ಸು ಎಲ್ಲ ಕ್ರೀಡಾರ್ಥಿಗಳದ್ದಾಗಿರಲಿ ಎಂದರು.
ಪ್ರಾಂಶುಪಾಲ ಸಂದೀಪ ಸೋಮಸೋಳೆ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಶಿಕ್ಷಕ ಅಜೀತ ಕವಟೇಕಾರ, ಮಹೇಶ ಪಾಟೀಲ, ಅಮರೇಶಗೌಡ ಪಾಟೀಲ, ಕೀರ್ತಿ ಪಾಟೀಲ, ಸೀನಿಯರ್ ಇಂಜಿನಿಯರ್ ರಘು ಮತ್ತಿತರರು ಇದ್ದರು.
ಈ ವೇಳೆ ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಮತ್ತು ಚೆಸ್ ಆಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.