ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್ಗಳ ವರ್ಗಾವಣೆ ಮತ್ತು ಪಾಸ್ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭಾಗದ ಡಿವೈಎಸ್ಪಿ ಶ್ರೀಧರ್ ಕೆ. ಪೂಜಾರ್ ಕೊನೆಗೂ ಎಸ್ಐಟಿ ಮುಂದೆ ಹಾಜರಾಗಿದ್ದರು.
ಹೈಕೋರ್ಟ್ ಸೂಚನೆಯಂತೆ ಡಿವೈಎಸ್ಪಿ ಶ್ರೀಧರ್ ಕೆ. ಪೂಜಾರ್ ಎಸ್ಐಟಿ ಮುಂದೆ ಬುಧವಾರ ಬೆಳಗ್ಗೆ ಹಾಜರಾಗಿದ್ದರು. ಆದರೆ ಪ್ರಕರಣ ತನಿಖಾಧಿಕಾರಿ ಡಿವೈಎಸ್ಪಿ ಬಾಲರಾಜು ಅವರು ವೈದ್ಯಕೀಯ ರಜೆವಿದ್ದ ಕಾರಣ ಆರೋಪಿತ ಅಧಿಕಾರಿಯನ್ನು ಮತ್ತೆ ನಿಗದಿತ ದಿನದಂದು ವಿಚಾರಣೆ ಬರುವಂತೆ ತಿಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ೨೦೨೦ರಲ್ಲಿ ಸಿಸಿಬಿಯಲ್ಲಿ ಆಗಿನ ಇನ್ಸ್ಪೆಕ್ಟರ್ ಆಗಿದ್ದ ಶ್ರೀಧರ್ ಪೂಜಾರ್ ಸೇರಿ ಇನ್ನಿತರರ ಮೇಲೆ ಶ್ರೀಕಿಯಿಂದ ಕ್ರಿಫ್ಟೊ ಕರೆನ್ಸಿ ವರ್ಗಾವಣೆ ಹಾಗೂ ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಿಸಿ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು, ಲಕ್ಷ್ಮೀಕಾಂತಯ್ಯ ಅವರನ್ನು ಬಂಧಿಸಲಾಗಿತ್ತು. ಬಳಿಕ ಶ್ರೀಧರ್ ಪೂಜಾರ್ ಬಂಧನಕ್ಕೆ ಮುಂದಾದಾಗ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯ ಸಿವಿಲ್ ಕೋರ್ಟ್ ಬಳಿ ಎಸ್ಐಟಿ ತಂಡದ ಕಾರಿಗೆ ಬೇರೆ ವಾಹನದಿಂದ ಡಿಕ್ಕಿ ಹೊಡೆಸಿ ಪರಾಯಾಗಿದ್ದರು. ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ನಿರಂತರವಾಗಿ ಅಧಿಕಾರಿಯನ್ನ ಬಂಧಿಸಲು ಶೋಧ ನಡೆಸಿದರೂ ಪತ್ತೆಯಾಗದಿದ್ದರಿಂದ ನ್ಯಾಯಾಲಯ ಅನುಮತಿ ಮೇರೆಗೆ ಘೋಷಿತ ಅಪರಾಧಿ ಎಂದು ತೀರ್ಮಾನಿಸಿ ಡಿವೈಎಸ್ಪಿ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಎಸ್ಐಟಿ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿತ್ತು. ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ಹಾಗೂ ವಿಚಾರಣಾ ನ್ಯಾಯಾಲಯ ಘೋಷಿತ ಆರೋಪಿ ಎಂದು ವಾರಂಟ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿವೈಎಸ್ಪಿ ಶ್ರೀಧರ್ ಕೆ. ಪೂಜಾರ್ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್ ಆರೋಪವನ್ನು ಮೇ ೨ರಂದು ರದ್ದುಪಡಿಸಿತ್ತು. ಆದರೆ, ಎಫ್ಐಆರ್ನ್ನು ರದ್ದುಪಡಿಸಲು ನಿರಾಕರಿಸಿತ್ತು. ಅಲ್ಲದೇ, ಮೇ ೮ ರಂದು ಬೆಳಗ್ಗೆ ೯ ಗಂಟೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಸೂಚಿಸಿತ್ತು.