ಅಥಣಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋ ಕಾನೂನು ಜಾರಿ ಮಾಡಿದ್ದು, ಬೇಕಾಬಿಟ್ಟಿಯಾಗಿ ತೈಲ, ಅಡುಗೆ ಅನಿಲದ ಬೆಲೆ ಏರಿಕೆ ಮಾಡಿವೆ ಎಂದು ಆರೋಪಿಸಿ ಅಥಣಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟಿಸಿದರು. ಬಳಿಕ ತಹಸೀಲ್ದಾರ್ ದುಂಡಪ್ಪ ಕೋಮಾರ ಮೂಲಕ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮತ್ತು ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಸರ್ಕಾರ ದೇಶದ 135 ಕೋಟಿ ಜನರ ಹಿತ ಕಾಪಾಡಬೇಕು. 65 ಕೋಟಿ ರೈತರ ಬದುಕಿಗೆ ಆಸರೆ ಆಗಬೇಕು. ಆದರೆ, ರೈತರ ವಿರುದ್ಧವೇ ಕಾನೂನು ರೂಪಿಸುವುದು ಸರಿ ಅಲ್ಲ. ಕೇಂದ್ರ ಸರ್ಕಾರ ದಪ್ಪ ಚರ್ಮದ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿ ಸರ್ಕಾರ ದೇಶದ ಸಮಗ್ರ ಹಿತ ಕಾಪಾಡದೆ ಕೇವಲ ಶ್ರೀಮಂತರ, ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಿದೆ. ರೈತರಿಗೆ ಧಕ್ಕೆ ತರಬಲ್ಲ ಕರಾಳ ಕಾನೂನುಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಮಾತನಾಡಿ, ಸ್ವಾಭಿಮಾನಿ ರೈತರ ಬದುಕಿಗೆ ಧಕ್ಕೆ ಉಂಟು ಮಾಡಿರುವ ಸರ್ಕಾರದ ನೀತಿ ಖಂಡನೀಯ. ಕೂಡಲೇ ರೈತ ವಿರೋಯಾದ ಮೂರು ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಅದಕ್ಕೂ ಮೊದಲು ಪಟ್ಟಣದ ಮುರುಘೇಂದ್ರ ಬ್ಯಾಂಕ್ನಿಂದ ಅಂಬೇಡ್ಕರ್ ವೃತ್ತದವರೆಗೆ ನೂರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ತೆಲಸಂಗ ಬ್ಲಾಕ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಮುಖಂಡರಾದ ಸದಾಶಿವ ಬುಟಾಳಿ, ಸತ್ಯಪ್ಪ ಬಾಗೆಣ್ಣವರ, ಬಸವರಾಜ ಬುಟಾಳಿ, ರಮೇಶ ಸಿಂದಗಿ, ಸುನೀಲ ಸಂಕ, ರಾವಸಾಬ ಐಹೊಳೆ, ಸಲಾಂ ಕಲ್ಲಿ, ಮಲ್ಲಿಕಾರ್ಜುನ ಬುಟಾಳಿ, ರವಿ ಬಡಕಂಬಿ, ಶೇಖರ ಕೋಲಾರ ಮತ್ತಿತರರು ಇದ್ದರು.